ಮಂಡ್ಯ: ಕಳೆದ 15 ದಿನಗಳ ಹಿಂದೆ ರಾಜ್ಯದಲ್ಲಿ ಭ್ರೂಣಹತ್ಯೆ ಕೇಸ್ ಭಾರಿ ಸದ್ದು ಮಾಡಿತ್ತು. ಇದೀಗ ಮಂಡ್ಯ ಜಿಲ್ಲೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಫುಲ್ ಅಲರ್ಟ್ ಆಗಿದ್ದು, ಜಿಲ್ಲೆಯಲ್ಲಿನ ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಲೋಪವಿರುವ ಸ್ಕ್ಯಾನಿಂಗ್ ಸೆಂಟರ್ಗಳನ್ನು ಸೀಜ್ ಮಾಡಲಾಗುತ್ತಿದೆ.
ಮಂಗಳವಾರ ಸಂಜೆ ನಾಗಮಂಗಲದ 2 ಸ್ಕ್ಯಾನಿಂಗ್ ಸೆಂಟರ್ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಸಿಬ್ಬಂದಿಗಳ ಕಳ್ಳಾಟ ಬೆಳಕಿಗೆ ಬಂದಿದೆ. ಇಲ್ಲಿನ ಸಿಸ್ಟಮ್ನಲ್ಲಿದ್ದ ಡೇಟಾ ಡಿಲೀಟ್ ಮಾಡಿ ಅಧಿಕಾರಿಗಳನ್ನು ಕಣ್ತಪ್ಪಿಸಲು ಮಾಲೀಕರು ಪ್ರಯತ್ನ ಪಟ್ಟಿದ್ದಾರೆ. ಅಧಿಕಾರಿಗಳ ಭೇಟಿ ವೇಳೆ ಸಮರ್ಪಕ ದಾಖಲೆ ನೀಡದ ಹಿನ್ನೆಲೆ ಅಧಿಕಾರಿಗಳು ಸಿಸ್ಟಮ್ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಸ್ಕ್ಯಾನಿಂಗ್ ಮಾಡಿದ್ದ ಇಮೇಜ್ ಹಾಗೂ ಡೇಟಾವನ್ನೇ ಸಿಬ್ಬಂದಿಗಳು ಡಿಲೀಟ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಮಾಹಿತಿ ಡಿಲೀಟ್ ಮಾಡಿರುವ ಹಿನ್ನೆಲೆ ಇಲ್ಲಿನ 2 ಸ್ಕ್ಯಾನಿಂಗ್ ಸೆಂಟರ್ಗಳನ್ನು ಸೀಜ್ ಮಾಡಲಾಗಿದೆ. ಕಾವೇರಿ ಹಾಗೂ ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್ಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.