ಮಂಡ್ಯ: ವಿಶ್ವ ವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವವು ಮಾ 16ರಿಂದ 28 ರವರೆಗೆ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ.
ಈ ಬಾರಿ ವೈರಮುಡಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಾರ್ಚ್ 16 ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, ಮೃತ್ತಿಕಾ ಸಂಗ್ರಹಣ, 17ರಂದು ಕಲ್ಯಾಣೋತ್ಸವ ಧಾರಾಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಠೆ, 18 ರಂದು 1 ನೇ ತಿರುನಾಳ್- ಧ್ವಜಾರೋಹಣ, ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ, ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾಪ್ರವೇಶ,19 ರಂದು 2 ನೇ ತಿರುನಾಳ್ ಶೇಷವಾಹನ ಪಡೆಯೇತ್ತ, 20 ರಂದು 3 ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, 21 ರಂದು 4 ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ( ರಾತ್ರಿ 8.30 ರಿಂದ ಮುಂಜಾನೆ 4.00 ಗಂಟೆಯ ವರೆಗೆ) ಪಡಿಯೇತ್ತ ನಡೆಯಲಿದೆ.
ಮಾ. 22 ರಂದು 5 ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, 23 ರಂದು 6 ನೇ ತಿರುನಾಳ್ – ಗಜೇಂದ್ರ ಮೋಕ್ಷ -ಆನೆವಸಂತ – ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, 24 ರಂದು 7ನೇ ತಿರುನಾಳ್- ಶ್ರೀ ಮನ್ಮಹಾರೋಥೋತ್ಸವ, ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಿಧಿಯಲ್ಲಿ, ಬಂಗಾರ ಪಲ್ಲಕ್ಕಿ ಉತ್ಸವ, 25 ರಂದು 8ನೇ ತಿರುನಾಳ್- ಪಂಗುನ್ಯುತ್ತರ, ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ ಕಾರ್ಯಕ್ರಮ ನಡೆಯುತ್ತದೆ.
ಮಾ. 26 ರಂದು 9ನೇ ತಿರುನಾಳ್- ಶ್ರೀ ನಾರಾಯಣಸ್ವಾಮಿ ಜಯಂತಿ, ಸಂಧಾನಸೇವೆ – ಚೂರ್ಣಅಭಿಷೇಕ- ಅವಭೃತ – ಪಟ್ಟಾಭಿಷೇಕ -ಪುಷ್ಪಮಂಟಪರೋಹಣ (ಸಮರಭೂಪಾಲವಾಹನ)- ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, 27 ರಂದು 10 ನೇ ತಿರುನಾಳ್ -ಶ್ರೀ ನಾರಾಯಣಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, 28 ರಂದು ಶ್ರೀ ಅಮ್ಮನವರಿಗೆ ಮತ್ತು ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವದೊಂದಿಗೆ ತೆರೆ ಬೀಳಲಿದೆ.