ಮಂಡ್ಯ: ಜಿಲ್ಲೆಯ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಪ್ರಕರಣದ ಹಿನ್ನೆಲೆಯಲ್ಲಿ ಫೆ.7ರಂದು ಕರೆನೀಡಲಾಗಿದ್ದು ಮಂಡ್ಯಬಂದ್ ನನ್ನು ಸಮಾನ ಮನಸ್ಕರ ವೇದಿಕೆ ಹಿಂತೆಗೆದುಕೊಂಡಿದೆ.
ಬಂದ್ ಹಿಂಪಡೆಯುವಂತೆ ಜಿಲ್ಲಾಡಳಿತ ಮಾಡಿದ ಮನವಿಯನ್ನು ಪುರಸ್ಕರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಸೇರಿದಂತೆ ನಾಯಕರು ಸಂಧಾನ ಸಭೆ ನಡೆಸಿದ್ದು, ಸಭೆಯಲ್ಲಿ ಬಂದ್ ವಾಪಸ್ ಪಡೆಯಲಾಗಿದೆ.
ಕೆರೆಗೋಡು ಹನುಮಧ್ವಜ ತೆರವು ಪ್ರಕರಣದ ಬಳಿಕ ಧರ್ಮದಂಗಲ್ ಶುರುವಾಗಿದ್ದು, ಹಿಂದೂಪರ ಸಂಘಟನೆಗಳು ಹನುಮಧ್ವಜ ಮತ್ತೆ ಹಾರಿಸುವಂತೆ ಒತ್ತಾಯ ಮಾಡುತ್ತಿದ್ದು, ಈ ಸಂಬಂಧ ಫೆಬ್ರವರಿ 9ರಂದು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದನ್ನು ವಿರೋಧಿಸಿ ಸಮಾನ ಮನಸ್ಕರ ವೇದಿಕೆ ಫೆ.7ರಂದು ಬಂದ್ ಗೆ ಕರೆ ನೀಡಿತ್ತು. ಇದಕ್ಕೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ, ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ.
ಸದ್ಯ ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುವುದರಿಂದ ಬಂದ್ ಹಿಂಪಡೆಯುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು ಅದರಂತೆ ಸಂಘಟನೆಗಳು ಬಂದ್ ನಿಂದ ದೂರಸರಿದಿವೆ.
ಈ ನಡುವೆ ಹಿಂದೂಪರ ಸಂಘಟನೆಗಳು ನೀಡಿರುವ ಫೆ.9ರ ಬಂದ್ ಗೂ ಅವಕಾಶ ನೀಡದಂತೆ ಸಮಾನ ಮನಸ್ಕರ ವೇದಿಕೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಸದ್ಯ 7ರಂದು ಬಂದ್ ಇಲ್ಲ ಎಂದು ತಿಳಿದು ಜನ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ 9ರಂದು ಬಂದ್ ನಡೆಯುತ್ತಾ ? ಈ ಬಗ್ಗೆ ಹಿಂದೂಪರ ಸಂಘಟನೆಗಳು ಯಾವ ತೀರ್ಮಾನ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ.