ನಾಗಮಂಗಲ: ವೈಜ್ಞಾನಿಕ ಕ್ಷೇತ್ರದಲ್ಲಿ ಕಲಿತವರು ನಿಖರತೆ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ವಿಜ್ಞಾನ ತಳಹದಿಯ ಯೋಚನೆಗಳು ಅಂಧಶ್ರದ್ಧೆಯನ್ನು ನಿವಾರಿಸಿ ಯಶಸ್ಸುಗಳಿಸುವ ವೈಚಾರಿಕತೆಯನ್ನು ನೀಡುತ್ತದೆ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಡಾ. ಸುಧಾಮೂರ್ತಿ ಹೇಳಿದರು.
ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಯವರ ಪಟ್ಟಾಭಿಷೇಕ ದಶಮಾನೋತ್ಸವ ಸಂದರ್ಭದಲ್ಲಿ ಶ್ರೇಷ್ಠ ವಿಜ್ಞಾನ ತಂತ್ರಜ್ಞಾನ ಸಾಧಕರಿಗೆ ಶ್ರೀಮಠದಿಂದ ಕೊಡಮಾಡುವ ಮೇರು ಪುರಸ್ಕಾರ “ವಿಜ್ಞಾತಂ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿ, ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ನಡುವೆ ಸಾಕಷ್ಟು ಅಂತರವಿರುತ್ತದೆ, ಇಂತಹ ವಿಜ್ಞಾನ ಮೇಳಗಳು ಅಧೀರತೆಯನ್ನು ಹೋಗಲಾಡಿಸಿ ಸಾಧನೆಯ ಮಾರ್ಗವನ್ನು ತೋರುತ್ತವೆ. ಹೊಸ ಆವಿಷ್ಕಾರಗಳು ಸಮಾಜವನ್ನು ಮುಂದುವರೆಸುತ್ತವೆ. ಶ್ರೀ ಬಾಲಗಂಗಾಧರನಾಥರ ಆಲದಮರವೆಂಬ ಶ್ರೀಮಠದ ಆಶ್ರಯದಲ್ಲಿ ಇಂತಹ ಶ್ರೇಷ್ಠ ಆಧ್ಯಾತ್ಮಿಕ ಗುರುಮಾನ್ಯರು ಅವತರಿಸಿ, ಸಮಗ್ರ ಭಾರತದ ಏಳಿಗೆಯಾಗಲಿ. ಶ್ರೀ ಗುರುಪೀಠದಿಂದ ಇಂತಹ ಮಹತ್ಕಾರ್ಯಗಳು ಸದಾ ನೆರವೇರುತ್ತಿರಲೆಂದು ಆಶಿಸಿದರು.
ದಿವ್ಯ ಉಪಸ್ಥಿತಿ ವಹಿಸಿದ್ದ ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ಜ್ಞಾನದ ಆಳ ವಿಜ್ಞಾನದ ವ್ಯಾಸಗಳು ಮಹಾ ಶಕ್ತಿಯನ್ನು ನೀಡುತ್ತವೆ, ಅದರಂತೆಯೇ ಶ್ರೀ ಬಾಲಗಂಗಾಧರನಾಥರ ಪುಣ್ಯಪ್ರಭೆಯಿಂದ ಶ್ರೀ ನಿರ್ಮಲಾನಂದನಾಥರ ಯತಿಶ್ರೇಷ್ಟತೆಯು ಇಂಥ ಸಾಧನೆಯ ಸಂಪನ್ನತೆಯಲ್ಲಿ ಪರಿಪೂರ್ಣ ಗೊಂಡಿದೆ ಎಂದರು.
ಪಟ್ಟಾಭಿಷೇಕ ದಶಮಾನೋತ್ಸವದ ‘ಹತ್ತು’ ಎಂಬುದು ಸಂಖ್ಯೆ ಮಾತ್ರವಲ್ಲ ಮುಂದಕ್ಕೆ ಹತ್ತು ಎಂಬ ಸಂಕೇತವನ್ನು ಸೂಚಿಸುವಂತೆ, ಶ್ರೀಗಳು ತನ್ನೊಂದಿಗೆ ಶ್ರೀಮಠವನ್ನೂ ವಿಶ್ವತೋಮುಖವಾಗಿ ಬೆಳೆಸುತ್ತಿದ್ದಾರೆ. ಜ್ಞಾನ-ವಿಜ್ಞಾನ-ತಂತ್ರಜ್ಞಾನವನ್ನು ಸಮನ್ವಯಗೊಳಿಸಿ ವಿಶೇಷ ವ್ಯಾಖ್ಯಾನ ನೀಡಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ ವೇದ- ಉಪನಿಷತ್ ಕಾಲದಿಂದಲೂ ಜ್ಞಾನವು ವಿಜ್ಞಾನದ ಭಾಗವಾಗಿಯೇ ಇದೆ. ಜ್ಞಾನಿಗಳು ಕಾಲಕಾಲಕ್ಕೆ ಆಧಾರ ಸಹಿತವಾಗಿ ಧಾರೆ ಎರೆಯುತ್ತಿದ್ದಾರೆ, ಹೊಸ ಯುಗದ ಅನ್ವೇಷಣೆಗೆ ವಿಜ್ಞಾನ ತಂತ್ರಜ್ಞಾನ ಮೇಳಗಳು ಸಹಕಾರಿಯಾಗಿವೆ. ನಿಸರ್ಗದಿಂದ ಜೀವತಳೆದು, ನಿಸರ್ಗದಲ್ಲೇ ಬೆರೆತು ಲೀನವಾಗುವ ನಿಸರ್ಗ ಜ್ಞಾನದ ಪವಿತ್ರತೆಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿ,ಆದಿಚುಂಚನಗಿರಿ ಸಿದ್ಧಸಿಂಹಾಸನದ ಪೀಠಾಧಿಕಾರದ ದಶಮಾನೋತ್ಸವ ಪಟ್ಟಾಭಿಷೇಕ ನೆರವೇರಿಸಿದ ಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿಯವರು “ಬಾಹ್ಯ ಬದುಕಿನ ಜಂಜಾಟ ಹಾಗೂ ಇತಿಮಿತಿಯ ಅರಿವಿನೊಂದಿಗೆ ಬದುಕುವುದೇ ಜೀವನದ ತಿಳಿವು” ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಪಾಂಡವಪುರ ಶಾಸಕ ಸಿ ಎಸ್ ಪುಟ್ಟರಾಜು, ನಾಗಮಂಗಲ ಶಾಸಕ ಕೆ ಸುರೇಶ ಗೌಡ, ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು, ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ ಎ ಶೇಖರ್, ಶ್ರೀ ಪ್ರಕಾಶನಾಥ ಸ್ವಾಮೀಜಿ ಸೇರಿದಂತೆ ಆದಿಚುಂಚನಗಿರಿ ಶಾಖಾ ಮಠಗಳ ಪೂಜ್ಯರು, ಪ್ರಾಂಶುಪಾಲರು, ಅಧಿಕಾರಿಗಳು ಇದ್ದರು.