ನಾಗಮಂಗಲ: ಆದಿಚುಂಚನಗಿರಿ ಮಠದ ವತಿಯಿಂದ ದತ್ತು ಪಡೆದಿರುವ ಬ್ರಹ್ಮದೇವರಹಳ್ಳಿ ಗ್ರಾ.ಪಂ ನ ವ್ಯಾಪ್ತಿಯ ಗ್ರಾಮಗಳಲ್ಲಿರುವ ಪುರಾತನ ಕಾಲದ ದೇವಾಲಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆದಿಚುಂಚನಗಿರಿ ವಿವಿಯು ಎರಡು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದೆ. ಆ ಮೂಲಕ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತಾಲೂಕಿನ ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿ ಗ್ರಾ.ಪಂ ಯನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ರವರ ನೇತೃತ್ವದಲ್ಲಿ ಆದಿಚುಂಚನಗಿರಿ ಮಠದಿಂದ ದತ್ತು ಪಡೆಯಲಾಗಿದ್ದು, ಅಂದಿನಿಂದ ಕುಡಿಯುವ ನೀರು ಘಟಕ ಸ್ಥಾಪನೆ, ಶಾಲೆಗಳ ಅಭಿವೃದ್ಧಿ, ಶಾಲೆ ಹಸಿರು ಹಲಗೆಗಳ ವಿತರಣೆ, ಪುಸ್ತಕಗಳು, ಪೀಠೋಪಕರಣ, ಕಂಪ್ಯೂಟರ್, ಕೋವಿಡ್ ಸಮಯದಲ್ಲಿ ಹೆಲ್ತ್ ಕಿಟ್ ವಿತರಣೆ, ಆರೋಗ್ಯ ಶಿಬಿರಗಳ ಆಯೋಜನೆ, ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಗಳ ಆಯೋಜನೆ, ಬಯಲು ಮುಕ್ತ ಶೌಚ ಅಭಿಯಾನ, ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್ ಟಿ.ವಿ ವಿತರಣೆಯೊಂದಿಗೆ ಡಿಜಿಟಲೀಕರಣ, ಕಲ್ಯಾಣಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಅಲ್ಲದೇ ಮುಂದುವರಿದ ಭಾಗವಾಗಿ ಗ್ರಾ.ಪಂ ವ್ಯಾಪ್ತಿಯ ಬಿ.ಶೆಟ್ಟಹಳ್ಳಿ ಗ್ರಾಮದಲ್ಲಿರುವ ಪುರಾತನ ಹಿತ್ಲಾಡೇಶ್ವರ ಮತ್ತು ಬೋರೇದೇವರ ದೇವಾಲಯಗಳನ್ನು ಜೀರ್ಣೋದ್ಧಾರಕ್ಕೆ ಕ್ರಮವಹಿಸಿದ್ದು, ದೇವಾಲಯಗಳಲ್ಲಿ ಶಿಥಿಲವಾಗಿದ್ದ ಮೇಲ್ಛಾವಣಿ, ಗೋಡೆಗಳನ್ನು ಅಭಿವೃದ್ಧಿಪಡಿಸಿ ಬಣ್ಣ ಬಳಿಯಲು ಕ್ರಮವಹಿಸಲಾಗಿದೆ.
ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಜೊತೆಗೆ ಜನರಲ್ಲಿ ಆದಿಚುಂಚನಗಿರಿ ವಿವಿಯ ವತಿಯಿಂದ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಗಿದೆ. ಪೂಜಾ ಕಾರ್ಯಕ್ರಮ ಜರುಗದ ದೇವಾಲಯಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡುವ ಜೊತೆಗೆ ಪೂಜಾ ಕೈಂಕರ್ಯಗಳು ಜರುಗುವಂತೆ ಕ್ರಮವಹಿಸಿದೆ. ಮುಂದಿನ ಹಂತವಾಗಿ ಗ್ರಾ.ಪಂ ವ್ಯಾಪ್ತಿಯ ಇತರ ಗ್ರಾಮಗಳಲ್ಲಿರುವ ಪುರಾತನ ದೇವಾಲಯಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಯೋಜನೆಯನ್ನು ರೂಪಿಸಬೇಕೆಂಬ ಸ್ಥಳೀಯರು ಬೇಡಿಕೆಯಂತೆ ಹೊಸ ಯೋಜನೆಗಳನ್ನು ಆದಿಚುಂಚನಗಿರಿ ವಿವಿಯು ಕೈಗೊಂಡಿದೆ.
ಗ್ರಾ.ಪಂ ಸದಸ್ಯ ರವಿಗೌಡ ಮಾತನಾಡಿ ಆದಿಚುಂಚನಗಿರಿ ಮಠವು ನಮ್ಮ ಪಂಚಾಯಿತಿಯನ್ನು ದತ್ತು ಪಡೆದಿದ್ದು, ಅಭಿವೃದ್ಧಿಗೆ ನಿರಂತರವಾಗಿ ಕ್ರಮವಹಿಸುತ್ತಿದೆ. ಈಗ ಅಭಿವೃದ್ಧಿ ಕಾರ್ಯಕ್ರಮಗಳು ವೇಗ ಪಡೆದುಕೊಂಡಿದ್ದು, ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಆದಿಚುಂಚನಗಿರಿ ವಿವಿಯ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಲಿ ಎಂದರು.
ಗ್ರಾಮಸ್ಥರಾದ ಲೋಹಿತ್ ಮಾತನಾಡಿ ಗ್ರಾಮದಲ್ಲಿ ಆಸ್ಪತ್ರೆ, ಶಾಲೆಗಳು, ಕುಡಿಯುವ ನೀರು, ದೇವಾಲಯಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಗುರುತಿಸಿಕೊಂಡು ಆದಿಚುಂಚನಗಿರಿ ವಿವಿಯು ದತ್ತು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಜೊತೆಗೆ ಗ್ರಾಮದ ವ್ಯಾಪ್ತಿಯ ಜನರನ್ನು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಒಗ್ಗೂಡುವಂತೆ ಮಾಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.