ಕುಂದಾಪುರ: ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಪೇಟೆ ಪರಿಸರದಲ್ಲಿರುವ ಖಾರ್ವಿ ಸಮಾಜ ಬಾಂಧವರು ಮತ್ತು ಮೊಗವೀರ ಸಮಾಜ ಬಾಂಧವರು ಮೃತಪಟ್ಟ ಕುಟುಂಬದ ಸದಸ್ಯರ ಸದ್ಗತಿಗಾಗಿ ಉಪಯೋಗಿಸುತ್ತಿರುವ ಅರಬ್ಬಿ ಸಮುದ್ರ ಕಡಲ ತೀರಕ್ಕೆ ಹೊಂದಿಕೊಂಡಿರುವ ಹೊಸಪೇಟೆ ಸ್ಮಶಾನವನ್ನು ಅಭಿವೃದ್ಧಿಗೊಳಿಸಬೇಕೆಂದು ಸಮಾಜ ಬಾಂಧವರು ಆಗ್ರಹಿಸಿದ್ದಾರೆ.
ತ್ರಾಸಿ ಗ್ರಾಮದ ಹೊಸಪೇಟೆ ಪರಿಸರದ ಸ್ಥಳೀಯ ಖಾರ್ವಿ ಸಮಾಜ ಮತ್ತು ಮೊಗವೀರ ಸಮಾಜದವರು ಕಳೆದ 50 ಕ್ಕೂ ಅಧಿಕ ವರ್ಷಗಳಿಂದ ಉಪಯೋಗಿಸುತ್ತಿರುವ ತ್ರಾಸಿ-ಹೊಸಪೇಟೆ ಸ್ಮಶಾನದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲದೆ ಇರುವುದರಿಂದ ರಾತ್ರಿ ಸಮಯದಲ್ಲಿ ಕತ್ತಲೆಯಲ್ಲೆ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಇದೆ.
ಕಡಲ ತೀರ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ:ಕಡಲ ತೀರಕ್ಕೆ ಹೊಂದಿಕೊಂಡಿರುವ ಹೊಸಪೇಟೆ ಸ್ಮಶಾನದ ಬಳಿ ಕಡಲ ಕೊರೆತ ಉಂಟಾದ ಪರಿಣಾಮ ಕಡಲ ತೀರದ ದಡ ಶಿಥಿಲಗೊಂಡಿದೆ.ಮಳೆಗಾಲದಲ್ಲಿ ಮತ್ತು ತೂಫಾನ್ ಸಂಭವಿಸುವ ಸಂದರ್ಭದಲ್ಲಿ ಕಡಲಿನ ನೀರು ಸ್ಮಶಾನ ಜಾಗವನ್ನು ಆವರಿಸುತ್ತಿದೆ ಸ್ಮಶಾನದ ರಕ್ಷಣೆ ದೃಷ್ಟಿಯಿಂದ ಕಡಲ ತೀರಕ್ಕೆ ಕಲ್ಲುಗಳನ್ನು ಹಾಕಬೇಕ್ಕೆನ್ನುವುದು ಮೊಗವೀರ ಮತ್ತು ಖಾರ್ವಿ ಸಮಾಜ ಬಾಂಧವರ ಆಗ್ರಹವಾಗಿದೆ.
ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಬೇಡಿಕೆ:ಶವ ಸಂಸ್ಕರಾವನ್ನು ಕೈಗೊಳ್ಳುವ ಸ್ಮಶಾನದ ಸುತ್ತಲೂ ಕಂಪೌಂಡ್ ನಿರ್ಮಾಣದ ಕಾರ್ಯ ಆಗಬೇಕಿದೆ,ಬಹು ಮುಖ್ಯವಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ,ಬಾವಿ ನೀರನ್ನು ಬಳಕೆ ಮಾಡಿಕೊಳ್ಳಲು ಮೋಟರ್ ಅಳವಡಿಕೆ ಸಹಿತ ನಳ್ಳಿ ನೀರಿನ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗಿದೆ, ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯ ಆಗಬೇಕಿದೆ.