ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದರಿಂದ ಕೆಆರ್ಎಸ್ ಡ್ಯಾಮ್ನ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಈಗಾಗಲೇ ನೀರಿನಮಟ್ಟ 100 ಅಡಿಗೆ ಕಡಿಮೆಯಾಗಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶದ ಪ್ರಕಾರ 15 ದಿನ ತಮಿಳುನಾಡಿಗೆ ನೀರನ್ನ ಕೊಟ್ರೆ ಡ್ಯಾಮ್ನ ನೀರಿನ ಮಟ್ಟ 90 ಅಡಿಗೆ ಕುಸಿಯುತ್ತದೆ. ಹೀಗೆ ಮುಂದಿವರಿದ್ರೆ ಸಂಪೂರ್ಣವಾಗಿ ಕೆ.ಆರ್.ಎಸ್ ಡ್ಯಾಂ ಬರಿದಾಗುವ ಆತಂಕ ಮೂಡಿದೆ.
ಇನ್ನೂ ಕಾವೇರಿ ಬಗ್ಗೆ ನಾಳೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರೂ ಆಗಿರೋ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿ ಇಂದು ಕಾನೂನು ತಂಡದ ಜೊತೆ ಸಭೆ ನಡೆಸಲಿದ್ದಾರೆ. ಈಗಾಗಲೇ ದಿನಕ್ಕೆ 5 ಸಾವಿರದ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡುಗಡೆಗೆ ಮಾಡಬೇಕು ಎಂದು ಪ್ರಾಧಿಕಾರ ಆದೇಶ ಮಾಡಿದೆ. ಆದರೆ ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಕಷ್ಟವೆಂದು ರಾಜ್ಯ ಸರ್ಕಾರ ಹೇಳಿದೆ.
ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕೊನೆಗೂ ಮಂಡ್ಯ ಜೆಡಿಎಸ್ ನಾಯಕರು ಮೌನ ಮುರಿದಿದ್ದಾರೆ. ಇಷ್ಟುದಿನ ಸೈಲೆಂಟ್ ಆಗಿದ್ದ ಜೆಡಿಎಸ್ ನಾಯಕರು ಇದೀಗ ರೊಚ್ಚಿಗೆದ್ದಿದ್ದು, ಸರ್ಕಾರಕ್ಕೆ ಇಂದು ಮತ್ತು ನಾಳೆ ಡೆಡ್ಲೈನ್ ನೀಡಿದ್ದಾರೆ. ಈ 2 ದಿನದದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡ್ತಿರೋದನ್ನು ನಿಲ್ಲಿಸದಿದ್ದರೆ ಸೆ.02 ರಂದು ಶನಿವಾರ ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರು ಬಿಡುಗಡೆಗೆ ಖಂಡಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆ.30 ರಿಂದ ಕೆ.ಆರ್.ಎಸ್. ಅಣೆಕಟ್ಟೆ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮುಂಜಾನೆಯು ಹೋರಾಟ ಮುಂದುವರೆಸಿರೋ ಹೋರಾಟಗಾರರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.