ಮಂಡ್ಯ: ಎಲೆಕ್ಟ್ರಿಕಲ್ ಬೈಕ್ ಚಾರ್ಜ್ ಹಾಕಿದ್ದ ವೇಳೆ ಸ್ಪೋಟಗೊಂಡ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೈಕ್ ಸೇರಿದಂತೆ ಕೆಲವು ವಸ್ತುಗಳು ಸುಟ್ಟು ಕರಕಲಾಗಿವೆ.
ವಳೆಗೆರೆಹಳ್ಳಿಯ ಮುತ್ತುರಾಜ್ ಎಂಬುವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮುತ್ತುರಾಜ್ ಎಂಬುವರು ಎಂದಿನಂತೆ ತಮಗೆ ಸೇರಿದ ಎಲೆಕ್ಟ್ರಿಕ್ ಬೈಕ್ ನ್ನು ಚಾರ್ಜ್ ಗೆ ಮನೆಯ ಒಳಗೆ ಹಾಕಿದ್ದರು. ಈ ವೇಳೆ ಚಾರ್ಜ್ ನಲ್ಲಿದ್ದ ಬೈಕ್ ದಿಢೀರ್ ಸ್ಟೋಟ ಗೊಂಡಿದೆ.
ಈ ಸಂದರ್ಭ ಮನೆಯಲ್ಲಿ ಐದು ಮಂದಿ ಇದ್ದರಾದರೂ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸ್ಪೋಟದ ರಭಸಕ್ಕೆ ಮನೆಯಲ್ಲಿ ಗ್ರಹೋಪಯೋಗಿ ವಸ್ತುಗಳಾದ ಟಿವಿ, ಫ್ರಿಡ್ಜ್, ಡೈನಿಂಗ್ ಟೇಬಲ್ ಸೇರಿದಂತೆ ಇತರೆ ವಸ್ತುಗಳು ಹಾಳಾಗಿದ್ದು, ಬೈಕ್ ಗೆ ಬೆಂಕಿ ಹತ್ತಿ ಉರಿದಿದ್ದು, ಅದನ್ನು ನೀರು ಹಾಕಿ ನಂದಿಸಲಾಗಿದೆ. ಸ್ಪೋಟ ಹೇಗೆ ಸಂಭವಿಸಿದೆ? ಸ್ಪೋಟಕ್ಕೆ ಕಾರಣವೇನು? ಎಂಬುದರ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಾಗಿದೆ.