ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನದಿ ತೀರದ ಹಳೆಯ ಅಕ್ಕಿಹೆಬ್ಬಾಳಿನಲ್ಲಿರುವ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ದೇವರ ಮಹಾ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ.
ದೇವಾಲಯದ ಸಚಿವ ಕೆ.ಸಿ.ನಾರಾಯಣಗೌಡ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರೆ, ಉತ್ಸವ ಮೂರ್ತಿಯನ್ನು ಭಕ್ತಾಧಿಗಳೊಂದಿಗೆ ತಮ್ಮ ಹೆಗಲ ಮೇಲೆ ಹೊತ್ತು ರಥದ ಬಳಿಗೆ ತಂದ ಸಚಿವರು ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ ಅವರು ಪ್ರತಿವರ್ಷವೂ ಅಕ್ಕಿಹೆಬ್ಬಾಳು ಗ್ರಾಮದ ಎಲ್ಲ ಸಮುದಾಯದ ಹಿರಿಯ ಮುಖಂಡರು, ಗ್ರಾಮಸ್ಥರು, ಮಹಿಳೆಯರು, ಯುವಕರು ಮಕ್ಕಳು ಸೇರಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಇನ್ನು ಮುಂದೆಯೂ ಹೆಚ್ಚಿನ ರೀತಿ ಮುಂದುವರೆಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸುವ ಶಕ್ತಿಯನ್ನು ಭಗವಂತ ನಿಮಗೆ ಶಕ್ತಿ ನೀಡಲಿ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ಆಶೀರ್ವಾದ ಸದಾಕಾಲವೂ ಇರಲಿ ಎಂದು ತಿಳಿಸಿದರು.
ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ವಿಶೇಷವೇನೆಂದರೆ ರಥೋತ್ಸವಕ್ಕೆ ಮೊದಲು ಆಗಸದಲ್ಲಿ ಗರುಡ ದೇವಾಲಯದ ಸುತ್ತ ಮೂರು ಸುತ್ತಲೂ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಗರುಡ ಅದೇ ರೀತಿ ದೇವರ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಮಾಡಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು ತೇರು ಎಳೆದು ಗೋವಿಂದ ಗೋವಿಂದ ಗೋವಿಂದ ಎಂದು ಘೋಷಣೆಗಳನ್ನು ಕೂಗಿ ದೇವರ ಕೃಪೆಗೆ ಪಾತ್ರರಾಗಿ ಪುಳಕಿತರಾದರು.
ಲಕ್ಷ್ಮಿನರಸಿಂಹಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಅಕ್ಕಿಹೆಬ್ಬಾಳು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ಅನ್ನದಾಸೋಹಕ್ಕೆ ಸಚಿವರಾದ ನಾರಾಯಣಗೌಡ ಅವರು ಭಕ್ತರಿಗೆ ದೇವರ ಪ್ರಸಾದ ಬಡಿಸುವ ಮೂಲಕ ಚಾಲನೆ ನೀಡಿದರು.
ತಹಶಿಲ್ದಾರ್ ನಿಸರ್ಗಪ್ರಿಯ, ಅಕ್ಕಿಹೆಬ್ಬಾಳು ಗ್ರಾ.ಪಂ.ಅಧ್ಯಕ್ಷೆ ನಾಗೇಶ್ವರಿ, ಉಪಾಧ್ಯಕ್ಷ ಸತೀಶ್ ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ಜಿ.ಪಂ ಮಾಜಿ ಸದಸ್ಯ ಅಂಬರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರವಿಕುಮಾರ್ ಸೇರಿದಂತೆ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.