ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆಲ್ಲೋದಾಗಿ ಬಿಜೆಪಿ ಹೇಳಿದೆ ಇದು ಸಾಧ್ಯನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಸಮಾವೇಶದಲ್ಲಿ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆಲ್ಲೋದಾಗಿ ಬಿಜೆಪಿ ಹೇಳಿದೆ. 28 ಸ್ಥಾನಗಳೂ ಗೆಲ್ಲಲು ಸಾಧ್ಯನಾ ಅಂತಾ ಬಿಜೆಪಿಗೆ ಕೇಳುತ್ತೇನೆ. ನಾವು ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂದರು.
ನಾವು ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ. ಬಿಜೆಪಿ, ಜೆಡಿಎಸ್ ರೀತಿ ಕೊಟ್ಟ ಮಾತಿಗೆ ತಪ್ಪಿಸಿಕೊಳ್ಳುವವರು ಅಲ್ಲ. ನಾವು ನೂರಕ್ಕೆ ನೂರು ಭರವಸೆಗಳನ್ನು ಈಡೇರುತ್ತೇವೆ. ನಾನೇ ಬಂದು ಹನಿ ನೀರಾವರಿ ಯೋಜನೆ ಉದ್ಘಾಟನೆ ಮಾಡುತ್ತೇನೆ ಎಂದರು.
ಮಂಡ್ಯ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರುತ್ತದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಹಿಂದಿನ ಬಾರಿ ನಾವು ಮಾಡಿದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ಹೀಗಾಗಿ ನಮಗೆ ಸೋಲು ಆಯಿತು. ಅದರೆ ಈ ಬಾರಿ ಹಾಗೆ ಆಗಲ್ಲ ಎಂದರು.
ನಮ್ಮ ದೇಶದ ಪ್ರಧಾನಿ ಬರಿ ಸುಳ್ಳೇ ಹೇಳುವುದು. ಬಿಜೆಪಿಗೆ ಇನ್ನೊಂದು ಅನ್ವರ್ಥ ನಾಮ ಸುಳ್ಳಿನ ಪಾರ್ಟಿ. ಮೋದಿ ಅಷ್ಟು ಸುಳ್ಳು ಹೇಳಿದ ಪ್ರಧಾನಿ ಇಲ್ಲಿಯವರೆಗೂ ಬಂದಿಲ್ಲ. ಅಚ್ಚೇ ದಿನ್ ಅಯೇಂಗೇ ಅಂತಾ ಹೇಳಿದ್ದರು. ಬಂತಾ? ನಾವು ಎಲ್ಲರಿಗೂ ನಮ್ಮ ಗ್ಯಾರಂಟಿ ಕೊಡುತ್ತಿದ್ದೇವೆ. ಬಿಜೆಪಿ ಅವರಿಗೂ ಕೊಡುತ್ತಿದ್ದೇವೆ ಎಂದು ಹೇಳಿದರು.