ಕೆ.ಆರ್.ಪೇಟೆ: ಕಳೆದ 11ವರ್ಷಗಳಿಂದ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಕಿಕ್ಕೇರಿ ಗ್ರಾಮದ ಯೋಧ ಜನಾರ್ಧನಗೌಡ ಅನಾರೋಗ್ಯದಿಂದ ನಿಧನರಾಗಿದ್ದು, ಹುಟ್ಟೂರಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಐದು ವರ್ಷದ ಹಿಂದೆ ವಿವಾಹವಾಗಿದ್ದ ಯೋಧ ಜನಾರ್ಧನ್ಗೌಡರಿಗೆ 4 ವರ್ಷದ ಹೆಣ್ಣು ಮಗು ಇದೆ. ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಜನಾಧನಗೌಡರನ್ನು ಚತ್ತೀಸ್ಘಡ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಜನಾರ್ಧನ ನಿಧನರಾದರು.
ಶನಿವಾರ ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಕಿಕ್ಕೇರಿಯ ಕೆಪಿಎಸ್ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ವೀರಯೋಧ ಜನಾರ್ಧನ್ಗೌಡರ ಪಾರ್ಥಿವ ಶರೀರವನ್ನು ದೂರದ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ದೇಶಭಕ್ತರು ವೀಕ್ಷಿಸಿ ಕಂಬನಿ ಮಿಡಿದರು.
ಮೃತ ವೀರ ಯೋಧನ ಪಾರ್ಥಿವ ಶರೀರವನ್ನು ಶಾಸಕ ಹೆಚ್.ಟಿ.ಮಂಜು, ಜಿಲ್ಲಾಧಿಕಾರಿ ಕುಮಾರ್, ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಮಾಜಿ ಶಾಸಕ ಕೆಬಿಸಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ವಿಎಸೆಸೆನ್ ಮಾಜಿ ಅಧ್ಯಕ್ಷ ಶೇಖರ್, ಸೇರಿದಂತೆ ಹಲವು ಗಣ್ಯರು ದರ್ಶನ ಪಡೆದು ಅಶ್ರುತರ್ಪಣ ಸಲ್ಲಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಯೋಧನ ಮೆರವಣಿಗೆ ಸಾಗಿದ್ದು ಸಾವಿರಾರು ಜನತೆ ಅಂತಿಮ ದರ್ಶನ ಪಡೆದರು.
ಜನಾರ್ಧನ್ ಅಮರ್ ರಹೇ ಎಂಬ ಘೋಷಣೆಗಳು ಮೊಳಗಿದವು. ಅಂತಿಮವಾಗಿ ಭೂಸೇನೆಯ ಅಧಿಕಾರಿಗಳ ತಂಡ ರಾಷ್ಟ್ರದ್ವಜವನ್ನು ಯೊಧನ ಕುಟುಂಬಕ್ಕೆ ಹಸ್ತಾಂತರಿಸುವ ಮೂಲಕ ಹಲವು ಸುತ್ತುಗಳ ಕುಶಾಲತೋಪುಗಳನ್ನು ಸಿಡಿಸಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅಂತ್ಯ ಕ್ರಿಯೆ ನಡೆಯಿತು.