ಮೈಸೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳತನ ಮಾಡಲಾಗಿರುವ ಘಟನೆ ಪೊಲೀಸ್ ಬಡಾವಣೆಯಲ್ಲಿ ನಡೆದಿದೆ.
ಪೊಲೀಸ್ ಬಡಾವಣೆ ಎರಡನೇ ಹಂತದ (ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ) ತಿರುಮಲ ಪಬ್ಲಿಕ್ ಶಾಲೆ ಹತ್ತಿರ ಇರುವ ಕುಬೇರಸ್ವಾಮಿ ಎಂಬುವರ ಕಿಯಾ ಕಾರಿನ ನಾಲ್ಕು ಚಕ್ರಗಳನ್ನು ಶುಕ್ರವಾರ ರಾತ್ರಿ ಕಳ್ಳರು ಕದ್ದಿದ್ದಾರೆ. ನಿವಾಸಿಗಳ ಪ್ರಕಾರ ಇದು ಕಳೆದ ಒಂದು ತಿಂಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ.
ಬಹುತೇಕ ಪೊಲೀಸರು ಹಾಗೂ ಅಧಿಕಾರಿಗಳೇ ನೆಲೆಸಿರುವ ಬಡಾವಣೆಯಲ್ಲಿ ಮೇಲಿಂದ ಮೇಲೆ ಅಪರಾಧ ಕೃತ್ಯಗಳು ಘಟಿಸುತ್ತಿದ್ದರೂ ಈವರೆಗೆ ಆರೋಪಿಗಳ ಸುಳಿವು ಸಿಕ್ಕಿಲ್ಲ. ಪೊಲೀಸ್ ಬಡಾವಣೆಯಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಇಲ್ಲದಿರುವುದೇ ಈ ಅನಾಹುತಕ್ಕೆ ಕಾರಣ ಎಂಬುದು ಇಲ್ಲಿನ ಸ್ಥಳೀಯರ ಆರೋಪ. ಶುಕ್ರವಾರ ತಡರಾತ್ರಿ ವೇಳೆಗೆ ಕಳ್ಳತನ ನಡೆದಿದ್ದು, ಪ್ರಕರಣ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.