ಮಂಡ್ಯ: ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಹೋರಾಟ ನಡೆಸುತ್ತಿದ್ದರೆ, ಇತ್ತ ರೈತಸಂಘವೂ ಸ್ಪರ್ಧೆಗಿಳಿಯಲು ತಯಾರಿ ನಡೆಸುತ್ತಿದ್ದು ಸದ್ಯ ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವುದು ಖಚಿತವಾದಂತಿದೆ.
ಈ ಹಿಂದೆ ರೈತ ಸಂಘದಿಂದ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ನಿಧನದ ಬಳಿಕ ಅವರ ಪುತ್ರ ದರ್ಶನ ಪುಟ್ಟಣ್ಣಯ್ಯ ಅವರು ಅಮೇರಿಕಾದಲ್ಲಿ ನೆಲೆಸಿದ್ದರೂ ಈ ಬಾರಿ ತವರು ಕ್ಷೇತ್ರದಿಂದ ಅರ್ಥಾತ್ ಮೇಲುಕೋಟೆಯಿಂದ ಸ್ಪರ್ಧಿಸುವ ಮನಸ್ಸು ಮಾಡುತ್ತಿದ್ದರೆ, ಶ್ರೀರಂಗಪಟ್ಟಣದಿಂದ ರೈತಸಂಘದಿಂದ ಕಿರಂಗೂರು ಪಾಪು ಉ ಮೋಹನ್ಕುಮಾರ್ ಸ್ಪರ್ಧಿಸುವ ತಯಾರಿ ನಡೆಸುತ್ತಿದ್ದಾರೆ.
ಹಾಗೆನೋಡಿದರೆ ರಾಜ್ಯದಲ್ಲಿ ರೈತ ಸಂಘ ಪ್ರಬಲವಾಗಿದೆ. ಆದರೆ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು, ಬಣಗಳ ಜಗಳ ಮೊದಲಾದ ಕಾರಣದಿಂದಾಗಿ ರಾಜಕೀಯವಾಗಿ ಯಶಸ್ಸು ಸಾಧಿಸಲಾಗಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ಸ್ಪರ್ಧಿಸುತ್ತಿದ್ದು, ಅವರನ್ನು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆಯೂ ಇದೆ.
ಈ ನಡುವೆ 2023ರ ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಗೌರವಾನ್ವಿತ ಮತದಾರರ ಅನಿಸಿಕೆ ಕೇಳುವ ಬಗ್ಗೆ ಶ್ರೀರಂಗಪಟ್ಟಣದಲ್ಲಿ ಹಾಗೂ ಇತರೆ ಗ್ರಾಮಗಳಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ರೈತಸಂಘದ ಅಭ್ಯರ್ಥಿ ಕಿರಂಗೂರು ಪಾಪು ಉ|| ಮೋಹನ್ಕುಮಾರ್ ಕ್ಷೇತ್ರದ ಮತದಾರರಿಗೆ ಭಿತ್ತಿಪತ್ರ ನೀಡುವ ಮೂಲಕ ಪ್ರಚಾರ ಕಾರ್ಯಕೈಗೊಂಡಿದ್ದಾರೆ.
ಇನ್ನು ತಾಲ್ಲೂಕಿನ ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿ, ಹೆಬ್ಬಾಡಿ ಹುಂಡಿ, ಹಂಪಾಪುರ, ತರೀಪುರ, ಮಹದೇವಪುರ, ಮಹದೇವಪುರ ಬೋರೆ, ಚನ್ನಹಳ್ಳಿ, ಚನ್ನಹಳ್ಳಿ ಬೋರೆ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕಾರ್ಯಕೈಗೊಂಡು ತಮಗೆ ಈ ಬಾರಿ ಬೆಂಬಲಿಸುವ ಮೂಲಕ ವಿಧಾನಸಭೆಗೆ ಕಳುಹಿಸಿಕೊಡಬೇಕೆಂದು ಜನರಲ್ಲಿ ಮನವಿ ಮಾಡುತ್ತಿದ್ದಾರೆ.