ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹುಬ್ಬನಹಳ್ಳಿ ಕೆರೆಯಲ್ಲಿ ವಿದ್ಯುತ್ ಕಂಬವು ಬೀಳುವ ಹಂತದಲ್ಲಿದ್ದರೂ ಚೆಸ್ಕಾಂ ಅಧಿಕಾರಿಗಳು ಕಂಡೂ ಕಾಣದಂತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಜನರ ಬಲಿ ತೆಗೆದುಕೊಂಡ ಬಳಿಕ ಕಂಬಗಳನ್ನು ದುರಸ್ತಿ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಏಕೆಂದರೆ ಕೆರೆ ನಡುವಿನ ದಿಬ್ಬದಲ್ಲಿರುವ ವಿದ್ಯುತ್ ಕಂಬ ಸಂಪೂರ್ಣವಾಗಿ ಬಾಗಿ ನೆಲಕಚ್ಚುವ ಹಂತದಲ್ಲಿದೆ. ನಿತ್ಯವೂ ಇದೇ ಮಾರ್ಗದಲ್ಲಿ ತೆರಳುವ ಲೈನ್ಮನ್ಗಳು ಹಾಗೂ ಜೆಇ ಸೇರಿದಂತೆ ಇತರೆ ಅಧಿಕಾರಿಗಳು ನೋಡಿಯೂ ನೋಡದಂತೆ ತೆರಳುತ್ತಿರುವುದು ಕಂಡು ಬರುತ್ತಿದೆ. ಈ ಕಂಬಗಳು ಕೆರೆ ನೀರಿಗೆ ಒಂದೆರಡು ಅಡಿಗಳಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು ನೀರಿಗೆ ವಿದ್ಯುತ್ ತಗುಲಿದರೆ ಇಡೀ ಕೆರೆಗೆ ವಿದ್ಯುತ್ ಪ್ರವಹಿಸಲಿದೆ. ಪ್ರತಿದಿನ ಅನೇಕರು ಇಲ್ಲಿಗೆ ವಿವಿಧ ಉದ್ದೇಶಗಳಿಗಾಗಿ ಬರುತ್ತಾರೆ ಮತ್ತು ನೂರಾರು ದನ, ಎಮ್ಮೆ, ಆಡು, ಕುರಿ ಮುಂತಾದ ಪ್ರಾಣಿಗಳು ಈ ಕೆರೆಗೆ ನೀರನ್ನು ಕುಡಿಯಲು ಬರುತ್ತಿದ್ದು ಅನಾಹುತವಾದರೆ ಯಾರು ಹೊಣೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ನೆಲಕ್ಕೆ ಬಾಗಿರುವ ವಿದ್ಯುತ್ ಕಂಬಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಈ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸಲು ಯಾರೂ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಇನ್ನಾದರೂ ಕೂಡಲೇ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸಬೇಕು. ಇಲ್ಲದಿದ್ದರೆ ಚೆಸ್ಕಾಂ ಕಛೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹುಬ್ಬನಹಳ್ಳಿ ಗ್ರಾಮಸ್ಥರು ಚೆಸ್ಕಾಂ ಇಲಾಖೆಯ ಕಾರ್ಯಪಾಲಕ ಇಚಿಜಿನಿಯರ್ ಹಾಗೂ ಎಇಇ ಮತ್ತು ಜೆಇ ಅವರುಗಳಿಗೆ ಎಚ್ಚರಿಕೆ ನೀಡಿದ್ದಾರೆ.