ಭಾರತಿನಗರ: ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ದಲಿತ ಸಮುದಾಯದ ಪವಿತ್ರ ಮತ್ತು ದಿ.ಸ್ವಾಮಿ ಮೋಟಯ್ಯ ದಂಪತಿ ಪುತ್ರಿ ರಂಜಿತಾ ಎಸ್ ಅವರು ಸಿವಿಲ್ ಕೋರ್ಟ್ ನ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಸಾಧನೆಗೆ ಬಡತನ ಅಡ್ಡಿಯಾಗಲ್ಲ ಎಂಬುದನ್ನು ತೋರಿಸಿಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸದ್ಯ ಸಿವಿಲ್ ಕೋರ್ಟ್ ನ ನ್ಯಾಯಾಧೀಶೆಯಾಗಿ ಮದ್ದೂರು ತಾಲೂಕು ಮಾತ್ರವಲ್ಲದೆ ಮಂಡ್ಯ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ರಂಜಿತಾ ಎಸ್ ರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಪ್ರಯತ್ನ ಹಾಗೂ ಧೃಡಸಂಕಲ್ಪದ ಫಲವಾಗಿ ತಮ್ಮ 30 ನೇ ವಯಸ್ಸಿಗೇ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕರ್ನಾಟಕ ಸಿವಿಲ್ ಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತು. ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ರಂಜಿತಾ ಎಸ್.ರವರ ಹೆಸರು ಆಯ್ಕೆ ಪಟ್ಟಿಯಲ್ಲಿ ಪ್ರಕಟಗೊಂಡಿದ್ದು ಕರ್ನಾಟಕ ನ್ಯಾಯಾಂಗ ಸೇವಾ ಪರೀಕ್ಷೆ ಬರೆದು ಈಗ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ತಳ ಸಮುದಾಯ ಮತ್ತು ಬಡತನದಲ್ಲಿ ಬೆಳೆದು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡು ಛಲ ಬಿಡದ ಛಲಗಾತಿ ರಂಜಿತಾ ಎಸ್, ತಮ್ಮ ಹುಟ್ಟೂರಾದ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ದರು.
ಆ ನಂತರ ಅಣ್ಣೂರು ಗ್ರಾಮದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಡ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದು, ನಂತರ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು, ತದನಂತರ ಸರ್ಕಾರಿ ಸರ್. ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ತೂಬಿನಕೆರೆಯಲ್ಲಿ ಸ್ನಾತಕೊತ್ತರ ಪದವಿ ಪಡೆದು ನ್ಯಾಯಾಂಗ ವಿಚಾರದಲ್ಲಿ ಸಾಕಷ್ಟು ಒಲವು ಇದುದ್ದರಿಂದ ಮಂಡ್ಯದ ಪಿ.ಇ ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ, ಬಳಿಕ ಮಳವಳ್ಳಿಯಲ್ಲಿ ಹಿರಿಯ ವಕೀಲರಾದ ಡಿ.ಎಂ ಸುಂದರ್ ರವರ ಬಳಿ ಮಾರ್ಗದರ್ಶನ ಪಡೆದು ವಕೀಲೆ ವೃತ್ತಿ ಆರಂಭಿಸಿ ತಮ್ಮ 30ನೇ ವಯಸ್ಸಿನಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ.
ಅವಿರತ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಇದೀಗ ರಂಜಿತಾರವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಮಾಡಿರುವ ಸಾಧನೆ ತಮ್ಮ ಹುಟ್ಟೂರು,ಮಂಡ್ಯ ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದು,ಸಾಮಾಜಿಕ ಜಾಲಾತಾಣಗಳಲ್ಲಿ ಅಭೂತಪೂರ್ವ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆ ಯಾಗಿರುವ ರಂಜಿತಾ ಎಸ್.ರವರು ಮಾತನಾಡಿ ನನ್ನ ಮೊದಲ ಪ್ರಯತ್ನದಲ್ಲಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಅತ್ಯಂತ ಸಂತೋಷ ತಂದಿದೆ. ನನಗಿಂತ ನನ್ನ ತಾಯಿ ಹಾಗೂ ನನ್ನ ಕುಟುಂಬಸ್ಥರು ತುಂಬಾ ಖುಷಿಗೊಂಡಿದ್ದಾರೆ. ನನ್ನ ಈ ಸಾಧನೆಗೆ ‘ಸಂವಿಧಾನ ಶಿಲ್ಪಿ’ ವಿಶ್ವರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರು ಸ್ಫೂರ್ತಿಯಾಗಿದ್ದು, ಅವರ ತೋರಿದ ಮಾರ್ಗದಲ್ಲಿ ಕಾನೂನಾತ್ಮಕವಾಗಿ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.