ಮಂಡ್ಯ: ತಾಲ್ಲೂಕಿನ ಕೀಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಪೂರ್ಣವಾಗಿ ಮುಗಿಸದೇ ಪರೀಕ್ಷೆ ಬರೆಸುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ಸೋಮವಾರ ಶಾಲೆಯಿಂದ ಹೊರಗುಳಿದ ಘಟನೆ ನಡೆದಿದೆ.
ಶಾಲೆಯ ಆವರಣದ ರಂಗಮಂದಿರದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು, ಮೊದಲು ಪರಿಪೂರ್ಣವಾಗಿ ಪಾಠ ಮುಗಿಸಿ ಆನಂತರ ಪರೀಕ್ಷೆ ಬರೆಸಿ ಎಂದು ಹೇಳುವ ಮೂಲಕ ಪೋಷಕರು ಸಹ ಮಕ್ಕಳ ಪರವಾಗಿ ಮಾತನಾಡಿ, ಶಾಲೆಯ ಶಿಕ್ಷಕರ ವಿರುದ್ಧ ಹರಿಹಾಯ್ದರು.
ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಮಾತನಾಡಿ, ಶಾಲೆ ಉಳಿವಿಗೆ ಏನೆಲ್ಲಾ ಬೇಕೋ ಆ ವ್ಯವಸ್ಥೆಯನ್ನು ಮಾಡಿದ್ದೇವೆ, ಇಲ್ಲಿತನಕ ಸುಮಾರು 20 ಲಕ್ಷ ರೂಪಾಯಿಗಿಂತಲೂ ಹೆಚ್ಚು ಸೌಲಭ್ಯಗಳನ್ನು ನೀಡಿದ್ದೇವೆ, ಏಕೆಂದರೆ ನಿತ್ಯ ಸಚಿವರ ತವರೂರು ಎಂಬ ಕಾರಣಕ್ಕಾಗಿ ನಮ್ಮೂರಿನ ಹೆಸರು ಉಳಿವಿಗೆ ಸಹಕರಿಸಿದ್ದೇವೆ, ಮುಂದೆ ಅಂತಿಮ ಪರೀಕ್ಷೆ ಇದೆ, 1 ರಿಂದ 8 ರವರೆಗೆ ಕಲಿಕಾ ಬಲವರ್ಧನೆ, ಗಣಿತ, ಕನ್ನಡ ಪುಸ್ತಕಗಳ ಪಾಠ ನಡೆದಿಲ್ಲ, ಇದನ್ನು ಬಿಇಒ ಬಳಿ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಈ ಶಾಲೆಯಲ್ಲಿ ಏಳು ಜನ ಶಿಕ್ಷಕರು ಹಾಗೂ ನಿಯೋಜನೆ ಶಿಕ್ಷಕರು ಒಬ್ಬರಿದ್ದಾರೆ ಇವರಿಂದ ಒಟ್ಟು ಎಂಟು ಜನ ಶಿಕ್ಷಕರಿದ್ದಾರೆ, ಅಕಾಡೆಮಿ ಮುಗಿಯುವವರೆಗೂ ಯಾವುದೇ ತರಬೇತಿ ಬೇಡ ಎಂದು ಹೇಳಿದ್ದೇವೆ, ಈಗ ಮಕ್ಕಳು ಹೊರಗಡೆ ಕುಳಿತು ಮೊದಲು ಪಾಠ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ, ಇಲ್ಲಿವರೆಗೆ ಯಾವ ಅಧಿಕಾರಿಗಳು ಸಹ ಈ ಶಾಲೆಯ ಬಳಿ ಬಂದಿಲ್ಲ, ಹೀಗಾದರೇ ಎಲ್ಲಿ ಸರ್ಕಾರಿ ಶಾಲೆ ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಪೋಷಕರಾದ ಭವ್ಯ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ಅವರ ಮಕ್ಕಳ ಕ್ಷೇಮವೇ ಮುಖ್ಯ ಏಕೆಂದರೆ ಅವರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ ಹಾಗಾಗಿ ನಮ್ಮ ಸರ್ಕಾರ ಶಾಲೆಯ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಶಾಲೆಯಲ್ಲಿ ಮೊಟ್ಟೆ, ಊಟ ಕೊಟ್ಟರೆ ಸಾಕೇ ಪಾಠಗಳು ಸಹ ಪರಿಪೂರ್ಣವಾಗಿಯಾದರೂ ಮಾಡಬೇಕಲ್ಲವೇ, ಬಿಇಒ ಅವರಿಗೆ ಹಲವು ಬಾರಿ ದೂರು ನೀಡಿದರೂ ಸಹ ಪ್ರಯೋಜನಕ್ಕೆ ಬಂದಿಲ್ಲ, ಮೊದಲು ಸಮಸ್ಯೆ ಬಗೆಹರಿಸಿ ನಂತರ ಮಕ್ಕಳಿಗೆ ಪರೀಕ್ಷೆ ಕೊಡಲಿ ಎಂದು ಆಗ್ರಹಿಸಿದರು.