ಭಾರತೀನಗರ: ಮದ್ದೂರು ವಿಧಾನಸಭಾ ಕ್ಷೇತ್ರದ ನನ್ನ ಕೊನೆ ಚುನಾವಣೆಯಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ತಿಟ್ಟಮೇಲನಹಳ್ಳಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಕಳೆದ 23 ವರ್ಷಗಳಿಂದ ನನಗೆ ಕ್ಷೇತ್ರದಲ್ಲಿ ಆಶೀರ್ವಾದ ಮಾಡಿದ್ದೀರಿ, ಇದು ನನ್ನ ಕೊನೆ ಚುನಾವಣೆಯಾಗಿರುವುದರಿಂದ ನನಗೆ ಮತ್ತೊಮ್ಮೆ ಆಶೀರ್ವದಿಸಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಕ್ಷೇತ್ರದಲ್ಲಿ ಪ್ರತಿಯೊಂದು ಕಾಮಗಾರಿಗಳಿಗೂ ಶಾಸಕರೇ ಕೆಲಸ ಮಾಡಿಸಬೇಕೆಂಬುವುದನ್ನು ಜನರು ಒತ್ತಾಯ ಪಡಿಸುತ್ತಾರೆ. ಆದರೆ ಆಯಾಯ ಗ್ರಾ.ಪಂ, ತಾ.ಪಂ, ಜಿ.ಪಂ ವ್ಯಾಪ್ತಿಯಲ್ಲಿರುವ ಬರುವ ಕಾಮಗಾರಿಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಿಸದಿದ್ದಾಗ ನನಗೆ ಒತ್ತಡ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನರೇಗಾದಲ್ಲಿ ಗ್ರಾಮಗಳನ್ನು ಅಭಿವೃದ್ದಿ ಪಡಿಸಬಹುದು, ಅದಕ್ಕೆ ನನ್ನ ಸಹಕಾರ ಬೆಂಬಲವಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೂ ಕೂಡ ನಾನು ಮಾತನಾಡಿ ಹಣ ಬಿಡುಗಡೆಗೊಳಿಸಿ ಕೊಡುತ್ತೇನೆ. ಹಾಗಾಗಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಚರಂಡಿ ರಸ್ತೆ, ಕೆರೆಕಟ್ಟೆಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನನ್ನ ಅವಧಿಯಲ್ಲಿ ಮದ್ದೂರು ಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿದ್ದು, ಸರ್ಕಾರದಿಂದ ಹಂತ ಹಂತವಾಗಿ ಅನುದಾನ ತಂದು ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದ ಜನರ ಸಹಕಾರದಿಂದ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಇದೇ ಸಹಕಾರವಿರಲಿ ಎಂದು ಕೋರಿದರು.
ಜೆಡಿಎಸ್ ಮುಖಂಡ ಮಾರಸಿಂಗನಹಳ್ಳಿ ಮಲ್ಲರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಎಚ್.ಎಂ.ಮರಿಮಾದೇಗೌಡ, ಕೆಸ್ತೂರು ಬಿಳಿಯಪ್ಪ, ತಿಟ್ಟಮೇಲನಹಳ್ಳಿ ಶ್ರೀನಿವಾಸ್, ಬೊಪ್ಪಸಮುದ್ರ ಎಸ್.ಲಿಂಗಯ್ಯ, ಭೀಮಣ್ಣ, ಗೌರಿಶಂಕರ್, ಪುಟ್ಟಸ್ವಾಮಿ, ಮಡೇನಹಳ್ಳಿ ಒಡೆಯರ್, ಎಚ್.ಶ್ರೀನಿವಾಸ್, ಸಿದ್ದು, ಮೆಣಸಗೆರೆ ಮಹದೇವು, ಉಮೇಶ್, ದೇವೇಗೌಡನದೊಡ್ಡಿ ಬಸವರಾಜು, ಸೋಮ, ಕಾರ್ಕಹಳ್ಳಿ ಜಗದೀಶ್, ರಾಜೇಶ, ಲೋಕೇಶ, ಪ್ರದೀಪ್ ಸೇರಿದಂತೆ ಹಲವರಿದ್ದರು.