ಬೆಂಗಳೂರು: ಕನ್ನಡ ಚಲನ ಚಿತ್ರ ಇತಿಹಾಸದಲ್ಲಿ ಶುಶ್ರೂಷಕಿಯರ (ನರ್ಸ್ ಸಮುದಾಯದ) ಕಥೆಯನ್ನು ಆಧರಿಸಿದ ಉತ್ತಮ ಸಾಮಾಜಿಕ ಸಂದೇಶ ಹೊಂದಿರುವ “ಸೆಪ್ಟೆಂಬರ್13” ಚಲನಚಿತ್ರ ನ. 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಮಹಾಮಾರಿ ಕೊರೋನಾ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೊರೋನಾ ಪೀಡಿತರಿಗೆ ನಿಸ್ವಾರ್ಥ ಸೇವೆ ಸಲ್ಲಿದ ನರ್ಸ್ ಒಬ್ಬರ ನೈಜ ಕಥೆ ಆಧರಿಸಿದ ತೆಗೆದ ಹೃದಯ ಸ್ಪರ್ಶಿ ಚಿತ್ರ ಇದಾಗಿದೆ. ಬೆಂಗಳೂರಿನ ಸಿ ವಿ ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಿದ ನರ್ಸ್ ವೊಬ್ಬರ ನೈಜ ಕಥೆಯಾಧರಿಸಿ ಮಾಜಿ ಶಾಸಕ ಐವಾನ್ ನೀಗ್ಲಿ ಚಿತ್ರಕಥೆ ಬರೆದು ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.
ರಾಜಾ ಬಾಲಕೃಷ್ಣ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಾಜಿ ಸಚಿವ ಹಾಗೂ ಉಳ್ಳಾಲ ಕ್ಷೇತ್ರ ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವಾನ್ ನಿಗ್ಲಿ ನಟರಾದ ಜೈಜಗದೀಶ, ವಿನಯ ಪ್ರಸಾದ್ ಹಾಗೂ ಹೆಸರಾಂತ ತಮಿಳು ನಟ ವಿಕ್ರಮ್ ಸಹೋದರ್ ಅರವಿಂದ್ ವಿಕ್ಟರ್ ಪ್ರಮುಖ ಪಾತ್ರದಲ್ಲಿ ಅಭಿನಯಿದ್ದಾರೆ. ನಾಯಕಿ ಶ್ರೇಯಾ ರಿದಿಂಬನ್ ಹಾಗೂ ನಾಯಕ ನಟ ಚಿಂತನ್ ರಾವ್ ನರ್ಸ್ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಮೆಲಕು ಹಾಕುವಂತ ಹಾಡುಗಳಿವೆ.
ನರ್ಸ್ ವೃತ್ತಿಯ ಒತ್ತಡ ಹಾಗೂ ಸವಾಲುಗಳನ್ನು ಪ್ರಪ್ರಥಮಭಾರಿಗೆ ತೆರೆಯ ಮೇಲೆ ಚಲನಚಿತ್ರದ ಮೂಲಕ ತೋರಿಸಿದ ಹೆಗ್ಗಳಿಕೆ ನಿರ್ಮಾಪಕ ಐವಾನ್ ನೀಗ್ಲಿ ಹಾಗೂ ನಿರ್ದೇಶಕರಾದ ರಾಜಾ ಬಾಲಕೃಷ್ಣ ಅವರಿಗೆ ಸಲ್ಲಬೇಕಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ ಸುಧಾಕರ್ ಹಾಗೂ ಮಳಯಾಳಂ ಚಿತ್ರರಂಗದ ಹೆಸರಾಂತ ನಟ ಮುಮ್ಮುಟ್ಟಿ ಚಿತ್ರದ ಪೊಸ್ಟರ್ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಈ ಚಿತ್ರಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿರುವುದು ವಿಶೇಷವಾಗಿದೆ.