ಭಾರತೀನಗರ: ಪಶು ಸಂಗೋಪನೆ ಅಭಿವೃದ್ಧಿಗೊಳಿಸುವಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಭಾರತದ ಎರಡನೇ ಕುರಿಯನ್ ಎಂದು ಶಾಸಕ ಡಿ.ಸಿ.ತಮ್ಮಣ್ಣ ಬಣ್ಣಿಸಿದ್ದಾರೆ.
ಇಲ್ಲಿಗೆ ಸಮೀಪದ ಗುರುದೇವರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಮೂಲಸೌಕರ್ಯಗಳ ಅಭಿವೃದ್ಧಿ ನಿಧಿಯಡಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪಶುಚಿಕಿತ್ಸಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಾನವನ ಜನಸಂಖ್ಯೆಗೆ ಅನುಗುಣವಾಗಿ ಪಶು ಸಂಪತ್ತು ಬೆಳೆಯಬೇಕು. ದೇಶದಲ್ಲಿ ಪಶು ಸಂಪತ್ತಿನ ಸಂಖ್ಯೆ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇವೇಗೌಡರ ಮಾರ್ಗದರ್ಶನ ದಲ್ಲಿ ಎಚ್. ಡಿ. ರೇವಣ್ಣ ಪಶು ಸಂಗೋಪನೆಯನ್ನು ಅಭಿವೃದ್ಧಿಪಡಿಸಿದರು. ಜನರು ಪಶು ಸಂಗೋಪನೆಯ ಮೇಲೆ ಹೆಚ್ಚು ಅವಲಂಬಿತರಾದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಹಳ್ಳಿಗಾಡಿನ ಜನರು ಅವಲಂಬಿಸಿರುವ ಪಶು ಪಾಲನಾ ವೃತ್ತಿಗೆ ಪೂರಕವಾಗಿ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪಶು ಸಾಕಣೆಯಿದ್ದು, ಅವುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣವಾಗಿದೆ ಎಂದು ತಿಳಿಸಿದರು. ಸ್ವಗ್ರಾಮವಾದ ಗುರುದೇವರಹಳ್ಳಿಯಲ್ಲಿ ಎಲ್ಲಾ ಇಲಾಖೆಯ ಕಟ್ಟಡಗಳಿದ್ದು, ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ನಿರ್ಮಾಣ ಕಾರ್ಯ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಶಾಸಕ ತಮ್ಮಣ್ಣ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ರಾಜು, ಉಪಾಧ್ಯಕ್ಷ ರಮೇಶ್, ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಎಸ್.ಸಿ.ಸುರೇಶ್, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ಜಿ.ಪ್ರವೀಣ್ ಕುಮಾರ್, ಗುರುದೇವರಹಳ್ಳಿ ಪ್ರಭಾರ ಪಶುವೈದ್ಯಾಧಿಕಾರಿ ಡಾ.ಎಚ್.ವಿ.ಮುರುಳೀಧರ್, ಜಾನುವಾರು ಅಧಿಕಾರಿ ಅಣ್ಣೂರು ಚನ್ನಪ್ಪ, ಪಶು ವೈದ್ಯಕೀಯ ಪರಿವೀಕ್ಷಕಿ ಕೆ.ಎಸ್.ರಾಧ ಉಪಸ್ಥಿತರಿದ್ದರು.