ಭಾರತೀನಗರ: ಕಳೆದ ನಾಲ್ಕು ವರ್ಷಗಳ ಹಿಂದೆ ಅಂಬಿಸರ್ಕಲ್ನಲ್ಲಿ ನಿರ್ಮಿಸಲಾಗಿರುವ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಾರದ ಸುಮಲತಾ ಅಂಬರೀಶ್ ಅವರ ವಿರುದ್ಧ ಅಂಬಿ ಸರ್ಕಲ್ ಅಧ್ಯಕ್ಷ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ದಿ.ಅಂಬರೀಶ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಹುಟ್ಟೂರು ಭಾರತೀನಗರಕ್ಕೆ ಸಮೀಪದ ದೊಡ್ಡರಸಿನಕೆರೆ ಗ್ರಾಮಕ್ಕೆ ಸಂಸದೆ ಸುಮಲತಾ ಆಗಮಿಸಿದ ವೇಳೆ ಅಂಬಿ ಸರ್ಕಲ್ ಅಧ್ಯಕ್ಷ ಮಹೇಶ್ ತಮ್ಮ ಆಕ್ರೋಶವನ್ನು ಹೊರಹಾಕಿದರು. ಅಂಬಿಸರ್ಕಲ್ ನಲ್ಲಿ ಗಣೇಶ ಹಬ್ಬದಂದು ಗಣೇಶ ಮೂರ್ತಿಯನ್ನು ಇಡಲಾಗಿತ್ತು. ಆಗ ಸುಮಲತಾ ಅಂಬರೀಶ್ರವರು ಅಂಬಿಸರ್ಕಲ್ಗೆ ಬಂದರೂ ಅಂಬಿಅಣ್ಣನಿಗೆ ಒಂದು ಮಾಲಾರ್ಪಣೆ ಮಾಡದೆ ಹಾಗೆ ಹೋಗಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಅಭಿಮಾನಿಗಳಿಂದ ದೇಣಿಗೆ ಎತ್ತಿ ಅಂಬರೀಶ್ ಪುತ್ಥಳಿಯನ್ನು ಅಂಬಿಸರ್ಕಲ್ನಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ನಾನು ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಬೆಂಗಳೂರಿಗೆ ಹೋಗಿ ಆಹ್ವಾನಿಸಿದರೂ ಇದುವರೆಗೂ ನಮ್ಮ ಅಂಬಿಬಳಗದವರನ್ನು ಒಮ್ಮೆಯೂ ಕೂಡ ಗುರುತಿಸಿ ಮಾತನಾಡಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಗ್ರಾಮಕ್ಕೆ ಬರುವಾಗ ನಮಗೆ ಒಂದು ಮಾಹಿತಿಯೂ ನೀಡದೆ ಬಂದು ಹೋಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ನಾವು 4 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸದ ಕಾರಣ ಅಂಬಿಸರ್ಕಲ್ನಲ್ಲಿ ಕೆಲವೇ ಮಂದಿ ಇದ್ದಾರೆ. ಇದನ್ನು ಸುಮಲತಾ ಅವರು ಅರ್ಥಮಾಡಿಕೊಳ್ಳಬೇಕೆಂದು ಗುಡುಗಿದರು.
ಆದರೆ ದೊಡ್ಡರಸಿನಕೆರೆ ಗ್ರಾಮಕ್ಕೆ ಆಗಮಿಸಿದ ಪತ್ನಿ, ಸಂಸದೆ ಸುಮಲತಾ, ಪುತ್ರ ಅಭಿಷೇಕ್ಗೌಡ, ಚಿತ್ರನಟ ದೊಡ್ಡಣ್ಣ, ಚಲನಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಆಗಮಿಸಿ ಸಮಾಧಿಗೆ ಗಂಧದಕಡ್ಡಿ, ಕರ್ಪೂರದಾರತಿ ಬೆಳಗಿಸಿ ಪೂಜೆ ಸಲ್ಲಿಸಿದರು. ಗ್ರಾಮದ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ಅಂಬರೀಶ್ ಪುತ್ಥಳಿಯ ಬಳಿ ತೆರಳಿದ ಎಲ್ಲರೂ ಪುತ್ಥಳಿಗೆ ಹೂವಿನಹಾರ ಹಾಕಿ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಈ ಸಂದರ್ಭ ಗ್ರಾಮದಲ್ಲಿ ನೆರೆದಿದ್ದ ಅಂಬರೀಶ್ ಅಭಿಮಾನಿಗಳು ರೆಬಲ್ಸ್ಟಾರ್ ಅಂಬರೀಶ್ಗೆ ಜಯವಾಗಲಿ, ಮತ್ತೆ ಅಂಬಿ ಹುಟ್ಟಿಬರಲಿ ಎಂದು ಜೈಕಾರ ಹಾಕಿದರು. ಗ್ರಾಮದಲ್ಲಿ ಅಭಿಮಾನಿಗಳು ಗ್ರಾಮಸ್ಥರಿಗೆ ಬಿರಿಯಾನಿ ಊಟ ಹಾಕಿ ಪುಣ್ಯಸ್ಮರಣೆ ಆಚರಿಸಿದರು.