ಪಾಂಡವಪುರ: ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗ ಅನುಮೋದನೆಗೊಂಡಿದ್ದ ಇಲಾಖೆಯ ಎಲ್ಲಾ ಕಾಮಗಾರಿಗಳಿಗೆ ತಡೆಯೊಡ್ಡದೆ ಹಣ ಬಿಡುಗಡೆಗೊಳಿಸಿದ್ದಾರೆ ಎನ್ನುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಶ್ಲಾಘಿಸಿದ್ದಾರೆ.
ತಾಲೂಕಿನ ಕಾಮನಾಯಕನಹಳ್ಳಿ ಹೊರವಲಯದಲ್ಲಿ ಸಣ್ಣನೀರಾವರಿ ಇಲಾಖೆ ವತಿಯಿಂದ 9.98 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಡಕೆಕಟ್ಟೆ ಕೆರೆ ಹಾಗೂ ಬಳೆಅತ್ತಿಗುಪ್ಪೆ ಗ್ರಾಮದ ಸುತ್ತಲಿನ ಗ್ರಾಮಗಳ ಕೃಷಿ ಭೂಮಿಗೆ ನೀರೊದಗಿಸುವ ಉದ್ದೇಶದಿಂದ 9.95 ಕೋಟಿ ಅನುದಾನದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಮಂತ್ರಿ, ಸಂಸದ ಹಾಗೂ ಶಾಸಕನ್ನಾಗಿ ಕೆಲಸ ನಿರ್ವಹಿಸುವ ಭಾಗ್ಯ ನನಗೆ ಸಿಕ್ಕಿದೆ ಎಂದು ಶಾಸಕ ಹೇಳಿದರು.
ತಾಲೂಕಿನ ಬಳಘಟ್ಟ ಏತನೀರಾವರಿಗೆ ಚಾಲನೆ ನೀಡಲು ಆಗಮಿಸಿದ್ದ ಸಚಿವ ಮಾಧುಸ್ವಾಮಿ ಅವರು ತಮ್ಮ ಭಾಷಣದ ವೇಳೆ, ಜಿಲ್ಲೆಯ ಹಿರಿಯ ಮುತ್ಸಧಿ ರಾಜಕಾರಣಿಗಳಾದ ಶಂಕರೇಗೌಡ, ಮಾದೇಗೌಡ ಹಾಗೂ ಚೌಡಯ್ಯ ಅವರ ಸಾಲಿನಲ್ಲಿ ಸಿ.ಎಸ್.ಪುಟ್ಟರಾಜು ಅವರು ನಿಂತಿದ್ದಾರೆ ಎಂದು ಬಣ್ಣಿಸಿದರು. ಇದಕ್ಕಿಂತ ನನಗೆ ಹೆಚ್ಚಿನ ಪ್ರಶಂಸೆ ಬೇಕಾಗಿಲ್ಲ. ಕೊರೊನಾ ಬಂದ ಮೇಲೆ ಕೋಟಿ ಇದ್ದವರು ಒಂದೇ, ಏನೂ ಇಲ್ಲದವರು ಒಂದೇ ಎಂಬ ಭಾವನೆ ಜನರಲ್ಲಿ ಮೂಡಿದೆ. ಯಾರೂ ಯಾವಾಗ ಸಾಯುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ತೊಣ್ಣೂರು ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಸಮುದ್ರ ಸೇರುತ್ತಿತ್ತು. ಈ ನೀರನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಬಳೆಅತ್ತಿಗುಪ್ಪೆ ಬಳಿ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಬೇಸಿಗೆಯಲ್ಲೂ ಏತನೀರಾವರಿ ಮೂಲಕ ನೀರು ತುಂಬಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.