ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ ನಷ್ಟದಲ್ಲಿದೆ, ಇದು ಬಿಳಿಯಾನೆ, ಲಾಭದಾಯಕವಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ಜಿಲ್ಲೆಯ ಹಿರಿಯ ರೈತ ಮುಖಂಡ ಕೆ.ಬೋರಯ್ಯ ಅಭಿಪ್ರಾಯಪಟ್ಟರು.
ಅವರು ಬೆಂಗಳೂರು-ಮೈಸೂರು ಹೆದ್ದಾರಿಯ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮೈಷುಗರ್ ಉಳಿಸಿ ಹೋರಾಟದ 27ನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಮೈಷುಗರ್ ಕಾರ್ಖಾನೆ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ನಿರ್ಣಯವಾಗುವ ಬೆಲೆ ರಾಜ್ಯಕ್ಕೆ ಅನ್ವಯಿಸುತ್ತದೆ. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಆದರೆ ಕಾರ್ಖಾನೆಯ ವಿರುದ್ಧ ಖಾಸಗಿ ಸಕ್ಕರೆ ಕಾರ್ಖಾನೆಗಳ ಲಾಬಿ ಕಳೆದ ಹದಿನೈದುಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದೊಂದು ನಷ್ಟದ ಉದ್ದಿಮೆ, ಲಾಭದಾಯಕವಲ್ಲ, ಸಾಲದ ಸುಳಿಗೆ ಸಿಲುಕಿದೆ ಎಂದು ಹೇಳಿಕೊಂಡು ಬರಲಾಗುತ್ತಿದೆ. ಅದರಲ್ಲೂ 2008 ರಿಂದೀಚೆಗೆ ಕಾರ್ಖಾನೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕಾರ್ಖಾನೆ ಮುಚ್ಚಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಕಳೆದ 88 ವರ್ಷಗಳಿಂದ ಒಟ್ಟು 70 ಎಂ.ಡಿ. ಗಳು ಕರ್ತವ್ಯ ನಿರ್ವಹಿಸಿದ್ದು 1993 ರಿಂದೀಚೆಗೆ 34 ಜನ ಎಂ.ಡಿಗಳು ಕರ್ತವ್ಯ ನಿರ್ವಹಿಸಿದ್ದಾರೆ. ಕಾರ್ಖಾನೆಗೆ ಕೊಟ್ಟಿರುವ 504 ಕೋಟಿಯಲ್ಲಿ ರೈತರಿಗಾಗಲಿ, ಕಾರ್ಮಿಕರಿಗಾಗಲಿ ಯಾವುದೇ ಲಾಭವಾಗಿಲ್ಲ. ಇದನ್ನು ಸಾಲ ತೀರಿಸಲು ಬಳಸಿಕೊಂಡಿದ್ದಾರೆ. ಹೆಸರಿಗೆ ಕಾರ್ಖಾನೆಗೆ ಕೊಟ್ಟಿದ್ದೇವೆ ಎಂಬ ಮಾತುಗಳನ್ನಾಡಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸಬೇಕು ಅಲ್ಲಿಯವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ ಎಂದು ತಿಳಿಸಿದರು.
ಕುವೆಂಪು ನಗರ ಬೋರೇಗೌಡ ಪಾರ್ಕ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ನಿವೃತ್ತ ಪೊಲೀಸ್ ಅಧಿಕಾರಿ ರಾಜೇಗೌಡ ಮಾತನಾಡಿ, ನಿಷ್ಟಾವಂತ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದಾಗ ಕಾರ್ಖಾನೆ ಲಾಭ ಗಳಿಸುತ್ತಿದ್ದು ಅಂತಹ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಮೈಷುಗರ್ ನಷ್ಟಕ್ಕೆ ಸರ್ಕಾರದ ನಿಲುವು, ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸ್ವಂತ ಹಿತಾಸಕ್ತಿ ಕಾರಣವಾಗಿದೆ. ಸಾವಿರಾರು ಕುಟುಂಬಕ್ಕೆ ಆಸರೆಯಾಗಿರುವ ಕಾರ್ಖಾನೆ ಮಂಡ್ಯಕ್ಕೆ ಗೌರವ ತಂದುಕೊಟ್ಟಿದೆ. ಈ ಕಾರ್ಖಾನೆ ನಮ್ಮ ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಕಾಲಕ್ಕೂ ಮುಂದುವರೆದು ಹೆಸರು ಗಳಿಸಲಿ. ಇದಕ್ಕೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಿ ನ್ಯಾಯ ಪಡೆಯಬೇಕು ಎಂದು ತಿಳಿಸಿದರು.
ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕೆ.ಕೆ ಪ್ರಭು ಮಾತನಾಡಿ ಮೈಷುಗರ್ ಕಾರ್ಖಾನೆ ರೈತರಿಗೆ ಮಾತ್ರವಲ್ಲ ನಮ್ಮ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೂ ಕಾರಣವಾಗಿದೆ. ಸರಕಾರ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರಕಾರಿ ಸ್ವಾಮ್ಯದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ಸದಾ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಛಾಯಾಗ್ರಾಹಕರ ಸಂಘದ ಖಜಾಂಚಿ ವೆಂಕಟೇಶ್, ಜೋಗಪ್ಪ, ನಿವೃತ್ತ ಉಪನ್ಯಾಸಕ ಕೃಷ್ಣೇಗೌಡ ಮಾತನಾಡಿದರು. ಧರಣಿಯಲ್ಲಿ ರೈತ ರಕ್ಷಣಾ ಸಮಿತಿಯ ಸುನಂದಾ ಜಯರಾಂ, ಸಿಐಟಿಯುನ ಸಿ.ಕುಮಾರಿ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಹುರುಗಲವಾಡಿ ರಾಮಯ್ಯ,ಲಕ್ಷ್ಮಣ ಪಟೇಲ್, ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.