ಮಂಡ್ಯ : ತಾಲೂಕಿನ ಚಂದಗಾಲು ಗ್ರಾಮದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ಸುಮಾರು 30 ಗುಂಟೆ ಜಮೀನಿನಲ್ಲಿದ್ದ ಹಾಗೂ ಇಳುವರಿ ಸಮೀಪದಲ್ಲಿದ್ದ ಟೊಮೆಟೊ ಬೆಳೆಯನ್ನು ನಾಶಪಡಿಸಿದ್ದಾರೆ.
ಪಾಂಡವಪುರ ತಾಲೂಕು ಅಗಟಹಳ್ಳಿ ಗ್ರಾಮದ ಮಧು ಮತ್ತು ಅಭಿಷೇಕ್ ಎಂಬುವರು ಚಂದಗಾಲು ಗ್ರಾಮದ ಜೋಗಿಗೌಡ ಎಂಬುವರಿಂದ ಒಂದೂವರೆ ಎಕರೆ ಜಮೀನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದರು. ಅಂತೆಯೇ ಟೊಮೆಟೊ ಬೆಳೆ ಹಾಕಿದ್ದರು. ಇದಕ್ಕೆಂದು ಸುಮಾರು ಒಂದೂವರೆ ಲಕ್ಷ ರೂ ಸಾಲ ಮಾಡಿದ್ದರು. ಇನ್ನು 20 ರಿಂದ 25 ದಿನ ಕಳೆದಿದ್ದರೆ ಸಲು ಕೈಗೆ ಬರುತ್ತಿತ್ತು. ಆದರೆ ದುಷ್ಕರ್ಮಿಗಳು ಬೆಳೆಯನ್ನು ಹಾಳು ಮಾಡಿದ್ದಾರೆ.
ನಿರಂತರವಾಗಿ ಮಳೆಯಾಗಿದ್ದ ಕಾರಣ ಜಮೀನು ಶೀತವಾಗಿತ್ತು. ಈ ಹಿನ್ನೆಲೆಯಲ್ಲಿ 30 ಗುಂಟೆ ಗಿಡವನ್ನು ಬುಡಸಹಿತ ಕಿತ್ತು ಹಾಕಿದ್ದಾರೆ. ಮಧು ಮತ್ತು ಅಭಿಷೇಕ್ ಸೋಮವಾರ ಬೆಳಗ್ಗೆ ಬಂದಾಗ ದುಷ್ಕೃತ್ಯ ಗೊತ್ತಾಗಿದೆ. ಸಧ್ಯ ಟೊಮೆಟೊ ಬೆಲೆ ಕೆಜಿಗೆ 100 ರೂ ದಾಟಿರುವುದರಿಂದ ಲಕ್ಷಾಂತರ ರೂ ನಷ್ಟವಾದಂತಾಗಿದೆ.