News Karnataka Kannada
Friday, May 03 2024
ಮಂಡ್ಯ

ದುಬೈನಲ್ಲಿ ಉಚಿತ ಕನ್ನಡ ಕಲಿಕಾ ಕೇಂದ್ರ ಆರಂಭಿಸಿದ ಕನ್ನಡ ಮಿತ್ರರು

News
Photo Credit :

ಮಂಡ್ಯ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕೆ ಬೇಡವೇ ಎಂಬ ಗೊಂದಲದ ನಡುವೆ ದೂರದ ದುಬೈನಲ್ಲಿ ಕನ್ನಡ ಸಂಘದ ವತಿಯಿಂದ ನಡೆಯುತ್ತಿರುವ ಉಚಿತ ಕನ್ನಡ ಕಲಿಕಾ ಶಾಲೆಗಳು ಆರಂಭಗೊಂಡಿವೆ.

ದುಬೈನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲೆಯ ಮಹಾಪೋಷಕ ಪ್ರವೀಣ್‌ಕುಮಾರ್‌ಶೆಟ್ಟಿ, ಉಪಾಧ್ಯಕ್ಷ ಮೋಹನ್ ಅವರು ಪ್ರಸಕ್ತ ಶೈಕ್ಷಣಿಕ ಸಾಲಿನ ಆನ್‌ಲೈನ್ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ಉದ್ಯೋಗ ಅರಸಿ ದೂರದ ಅರಬ್ ಗಣತಂತ್ರ ರಾಷ್ಟ್ರಕ್ಕೆ ಬಂದಿರುವ ಕನ್ನಡಿಗರ ಮಕ್ಕಳಿಗೆ ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದಮ್ಮನ ಹಕ್ಕು ಎಂಬ ಘೋಷಣೆಯೊಂದಿಗೆ ಕನ್ನಡ ಮಿತ್ರರು ಎಂಬ ಸಂಘಟನೆ 2014 ರಲ್ಲಿ 40 ಮಕ್ಕಳೊಂದಿಗೆ ಆರಂಭವಾದ ಈ ಶಾಲೆಯಲ್ಲಿ ವಾರಂತ್ಯದಲ್ಲಿ ಮಾತ್ರ ಕನ್ನಡ ಕಲಿಸುವ ಮೂಲಕ ಎಲ್ಲ ಕನ್ನಡಿಗರ ಮಕ್ಕಳು ಕನ್ನಡ ಕಲಿಯಲು ಅನುವು ಮಾಡಿಕೊಟ್ಟಿದೆ.

ಕನ್ನಡ ವರ್ಣಮಾಲೆಯಿಂದ ಮೊದಲುಗೊಂಡು ಕನ್ನಡ ವಾಕ್ಯ ರಚನೆವರೆಗೂ ಪ್ರಾಥಮಿಕ , ಮಾಧ್ಯಮಿಕ , ಪ್ರೌಢ ಎಂಬ ವಿವಿಧ ತರಗತಿಗಳಲ್ಲಿ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಸಾರವಾಗಿ ಕನ್ನಡ ಕಲಿಸಲಾಗುತ್ತಿದೆ. ಅರಬ್ಬರ ನಾಡಲ್ಲಿ ಕನ್ನಡ ಕಲಿಸುವ ಕನ್ನಡ ಮಿತ್ರರ ಆಸೆಗೆ ಜೊತೆಯಾಗಿ ತಮ್ಮ ವಾರದ ಒಂದು ರಜಾದಿನವನ್ನು ಉಚಿತವಾಗಿ ಕನ್ನಡ ಕಲಿಸಲು ಮುಡಿಪಿಟ್ಟಿರುವ ನಮ್ಮ ಕನ್ನಡತಿಯರೇ ಇಲ್ಲಿನ ಶಿಕ್ಷಕಿಯರು ಎಂಬುದು ಹೆಮ್ಮೆಯ ವಿಷಯ ಎಂದು ಮಹಾಪೋಷಕ ಪ್ರವೀಣ್ ಶೆಟ್ಟಿ ತಿಳಿಸುತ್ತಾರೆ.

ದುಬೈನಲ್ಲಿ ಅಲ್ಲಿನ ಭಾಷೆಯಲ್ಲೇ ವ್ಯವಹಾರ, ಮಾತುಕತೆ ನಡೆಯುತ್ತದೆ. ಸ್ವದೇಶಕ್ಕೆ ಮರಳಿದಾಗ ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಬೇರೆ ಭಾಷೆಯಲ್ಲಿ ಹಳ್ಳಿಗಳಿಗೆ ತೆರಳಿ ತಮ್ಮ ಸ್ನೇಹಿತರು, ಆಪ್ತರು, ಸಂಬಂಧಿಗಳ ವಿಳಾಸ ಪತ್ತೆ ಮಾಡುವುದು ದುಸ್ತರ. ಇಂತಹ ಸನ್ನಿವೇಶವನ್ನು ಈಗಾಗಲೇ ಹಲವು ಅನಿವಾಸಿ ಭಾರತೀಯರು ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಎಲ್ಲ ಕನ್ನಡಿಗರ ಮಕ್ಕಳಿಗೂ ಕನ್ನಡ ಭಾಷೆಯನ್ನು ಕಲಿಸುವ ಉದ್ದೇಶ ಹೊಂದಿದ್ದೇವೆ ಎಂದು ವಿವರಿಸಿದರು.

ಕನ್ನಡ ಪಾಠಶಾಲೆ ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ಕನ್ನಡ ಮಿತ್ರರ ಕಾರ‌್ಯ ಶ್ಲಾಘನೀಯ. ಗಲ್ಪ್‌ನ ಎಲ್ಲ ಕನ್ನಡಿಗರೂ ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ ಕನ್ನಡ ಭಾಷೆಯನ್ನು ಮುಂದಿನ ಪೀಳಿಗಿಗೂ ಉಳಿಸಿ ಎಂದು ಯುಎಇ ಸಂಘಟನೆ ಅಧ್ಯಕ್ಷ ಶ್ರೀಧರ್ ಸಲಹೆ ನೀಡಿದರು.

ಕನ್ನಡ ಮಿತ್ರರು ಸಂಘಟನೆಯ ಉಪಾಧ್ಯಕ್ಷ ಸಿದ್ದಲಿಂಗೇಶ್ ಅವರು ಶಾಲೆ ನಡೆದು ಬಂದ ದಾರಿ ಕುರಿತು ಮಾತನಾಡಿ ಎಲ್ಲ ಕನ್ನಡಿಗರು ಈ ಬಾರಿಯ ಆನ್ ಲೈನ್ ತರಗತಿಯ ಸದುಪಯೋಗ ಪಡೆದುಕೊಳ್ಳುವಂತೆ ಕರೆಕೊಟ್ಟರು. ಕಾರ್ಯದರ್ಶಿ ಸುನಿಲ್ ಗವಾಸ್ಕರ್ ಮಾತನಾಡಿ, ಕನ್ನಡ ಮಿತ್ರರು, ಯು.ಎ.ಇ ಸಂಘಟನೆಯ ಇತರ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಶೈಕ್ಷಣಿಕ ಚಟುವಟಿಕೆಯ ನೇತೃತ್ವ ವಹಿಸಿರುವ ರೂಪ ಶಶಿಧರ್ ಮಾತನಾಡಿ, ಈ ಬಾರಿಯ ಆನ್ ಲೈನ್ ತರಗತಿಗಳಿಗೆ ನಡೆಸಿರುವ ತಯಾರಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದ ಬಗ್ಗೆ ತಿಳಿಸಿಕೊಟ್ಟರು. ಯು.ಎ. ಇ ಸಂಘಟನೆ ಖಜಾಂಚಿ ನಾಗರಾಜ್‌ರಾವ್ ಹಾಗೂ ಮಾಧ್ಯಮ ಪ್ರಮಖ್ ಬಾನುಕುಮಾರ್, ಕನ್ನಡ ಶಿಕ್ಷಕಿಯರು ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಲ್ಲಿನ ಮಕ್ಕಳಿಗೆ ಕನ್ನಡ ಶಾಲೆ ಎಂದರೆ ಬಹಳ ಅಚ್ಚುಮೆಚ್ಚು. ಕೇವಲ ಮಾತೃ ಭಾಷೆ ಮಾತನಾಡುತ್ತಿದ್ದ ಮಕ್ಕಳು ಕನ್ನಡ ಭಾಷೆ ಓದಲು ಮತ್ತು ಬರೆಯಲು ಶುರು ಮಾಡಿರುವುದು ಈ ಶಾಲೆಗೆ ಅತಿ ದೊಡ್ಡ ಯಶಸ್ಸು.                                                                         – ರೂಪ ಶಶಿಧರ್, ಕನ್ನಡ ಶಾಲೆಯ ಮುಖ್ಯಸ್ಥರು.

ವಾರಾಂತ್ಯ ಬಂದರೆ ಮಕ್ಕಳ ಜೊತೆ ಹೊರಹೋಗಲು ಯೋಚಿಸುವವರೇ ಇರುವಾಗ ಆ ದಿನ ತಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡ ಕಲಿಸುವ ಮೂಲಕ ದುಬೈನ ಕನ್ನಡ ಪಾಠಶಾಲೆ ಮತ್ತು ಅಲ್ಲಿನ ಪೋಷಕರು ಎಲ್ಲರಿಗೂ ಮಾದರಿ                – ಭಾನುಕುಮಾರ್, ದುಬೈ ಕನ್ನಡ ಸಂಘದ ಮಾಧ್ಯಮ ಪ್ರಮುಖ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು