ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಸಮರಕ್ಕೆ ಮುಂದಾಗಿರುವ ಸುಮಲತಾ ಕೆಆರ್ಎಸ್ ಡ್ಯಾಂಗೆ ಮತ್ತೆ ಭೇಟಿಗೆ ಮುಂದಾಗಿದ್ದಾರೆ. ಡ್ಯಾಂ ಭೇಟಿ ವೇಳೆ ಡ್ಯಾಂ ಮೆಟ್ಟಿಲಿನ ಗೋಡೆ ಕುಸಿದಿದ್ದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಗೋಡೆ ಕುಸಿಯಲು ಗಣಿಗಾರಿಕೆ ಕಾರಣವೇ ಎಂಬ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ನಂತರ ಸಂಸದೆ ಸುಮಲತಾ ಈ ಬಗ್ಗೆ ಕ್ರಮ ಜರುಗಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಸದೆ ಸುಮಲತಾ ಕೆಆರ್ಎಸ್ ಡ್ಯಾಂಗೆ ಭೇಟಿ ನೀಡುವ ಮುನ್ನ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರವೇ ಹೆಚ್ಚು ಚರ್ಚೆಯಾಗಲಿದೆ. ಬೇಬಿ ಬೆಟ್ಟದಲ್ಲಿ ಪದೇ ಪದೇ ಸ್ಫೋಟಕ ಪತ್ತೆಯಾಗುತ್ತಿರುವುದು ಸೇರಿದಂತೆ ಹಲವು ವಿಚಾರ ಪ್ರಸ್ತಾಪ ಸಾಧ್ಯತೆ ಇದೆ.
ಗಣಿಗಾರಿಕೆ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳನ್ನು ಸುಮಲತಾ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮಧ್ಯಾಹ್ನ 1.30ಕ್ಕೆ ಗ್ರಾಮ ಸಡಕ್ ಯೋಜನೆಯ ವಿಚಾರ ಸಂಕಿರಣ ಉದ್ಘಾಟನೆ ನಡೆಸಲಿರುವ ಸುಮಲತಾ, ಮಧ್ಯಾಹ್ನ 3.30ಕ್ಕೆ KRS ಡ್ಯಾಂ ಭೇಟಿ ಮಾಡಿ ಮೆಟ್ಟಿಲಿನ ಗೋಡೆ ಕುಸಿದಿದ್ದ ಸ್ಥಳ ಪರಿಶೀಲಿಸಲಿದ್ದಾರೆ.