ಕೊಡಗು: ಸೂಕ್ತ ಮಳೆ ಬೆಳೆ ಇಲ್ಲದೇ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸ ಹಾಗೂ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗದಂತಾಗಿದೆ. ಈಗ ಋತುಮಾನಕ್ಕೆ ತಕ್ಕಂತೆ ಸದ್ಯ ಕಾಫಿ ಕೀಳುವ ಕಾರ್ಮಿಕರ ಕೊರತೆ ಉಂಟಾಗಿದೆ. ಸದ್ಯ ಕಾಫಿ ಹಣ್ಣಾಗುವ ಕಾಲ. ಸ್ಪಲ್ಪ ಸಮಯ ಬಿಟ್ಟರೆ ಕಾಫಿ ಹಣ್ಣಾಗಿ ಗಿಡದಿಂದ ಬಿದ್ದು ಹೋಗುತ್ತದೆ. ಹೀಗಾಗಿ ಸೂಕ್ತ ಸಮಯಕ್ಕೆ ಅವುಗಳನ್ನು ಗಿಡದಿಂದ ಕೀಳಬೇಕು. ಆದರೆ ಕಾಫಿ ಕೀಳಲು ಕಾರ್ಮಿಕರು ಸಿಗದೆ ತೋಟದ ಮಾಲೀಕರು ಪರದಾಡುತ್ತಿದ್ದಾರೆ.
ಹೀಗಾಗಿ ಕೊಡಗಿನ ಕಾಫಿ ತೋಟದ ಮಾಲೀಕರೊಬ್ಬರು ಕಾಫಿ ಬೀಜ ಕೀಳಲು ಕಾರ್ಮಿಕರು ಸಿಗದೆ ಬೇಸತ್ತು ಕೊನೆಗೆ ರಸ್ತೆ ಬದಿ ಬಂದು ಕೆಲಸಗಾರರು ಬೇಕು ಎಂದು ಬೋರ್ಡ್ ಹಿಡಿದು ನಿಂತಿದ್ದಾರೆ.
ಬೋರ್ಡ್ನಲ್ಲಿ ಕೆಲಸಗಾರರು ಬೇಕಾಗಿದ್ದಾರೆ ಎಂದು ದೊಡ್ಡದಾಗಿ ಬರೆಯಲಾಗಿದ್ದು, ಪುರುಷರ ಹಾಗೂ ಮಹಿಳೆಯ ವೇತನವನ್ನು ಕೂಡ ಬೋರ್ಡ್ನಲ್ಲಿ ನಮೂದಿಸಿದ್ದಾರೆ. ಮಹಿಳೆಯರ ದಿನದ ವೇತನ 415 ರೂಪಾಯಿ ಹಾಗೂ ಪುರುಷರ ದಿನದ ವೇತನ 615 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ ನಿಗದಿತ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಬೋರ್ಡ್ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.