ಮಡಿಕೇರಿ: ಕೊಡಗಿನಲ್ಲಿ ಕಾಡಾನೆಗಳ ಆರ್ಭಟ ಮುಂದುವರೆದಿದ್ದು, ಯಾವಾಗ ಯಾರ ಮೇಲೆ ದಾಳಿ ಮಾಡುತ್ತವೆಯೋ ಎನ್ನಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಕಾಫಿ ಕೊಯ್ಲು ಕಾರಣ ಕಾರ್ಮಿಕರು ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದು ಭಯದಲ್ಲಿಯೇ ಕೆಲಸ ಮಾಡುವಂತಾಗಿದೆ.
ಈ ನಡುವೆ ಮದವೇರಿದ ಕಾಡಾನೆಯೊಂದು ಎಲ್ಲೆಂದರಲ್ಲಿ ಓಡಾಡಿದ್ದಲ್ಲದೆ, ಎದುಗಿಗೆ ಸಿಕ್ಕವರ ಮೇಲೆ ದಾಳಿ ಮಾಡಿದ್ದು ಪರಿಣಾಮ ಅರಣ್ಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ನ್ನು ಧ್ವಂಸ ಮಾಡಿರುವ ಘಟನೆಯೂ ಶನಿವಾರ ಸೋಮವಾರಪೇಟೆ ಬಳಿಯ ಕಾಜೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರು ಇತರೆ ಸಿಬ್ಬಂದಿಗಳಾದ ಆರ್.ಆರ್.ಟಿ ತಂಡದ ದರ್ಶನ್,ಹರ್ಷಿತ್,ವಿನೋದ್ ಹಾಗೂ ಅರಣ್ಯ ರಕ್ಷಕರಾದ ಶ್ರೀಕಾಂತ್ ಅವರು ಶನಿವಾರ ಬೆಳಿಗ್ಗೆ 7.30ರ ಸಮಯದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮದವೇರಿದ ಕಾಡಾನೆಯೊಂದು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್ ನಿಂದ ಇವರತ್ತ ಧಾವಿಸಿದೆ. ಇದನ್ನರಿತ ಅವರು ಬೈಕ್ ಬಿಟ್ಟು ಓಡಿದ್ದಾರೆ. ಆದರೆ ಇವರತ್ತಲೇ ಬಂದ ಕಾಡಾನೆ ಬೈಕ್ ಎಸೆದು, ಗುದ್ದಿ ಜಖಂಗೊಳಿಸಿದೆ. ಅಲ್ಲದೆ ಗೇಟ್ ಕೂಡ ಹಾಳುಗೆಡವಿದೆ.
ಆ ನಂತರ ಅದು ತೋಟದ ಕಡೆಗೆ ಹೋಗಿದೆ. ಈ ಘಟನೆಯಿಂದ ಸ್ಥಳೀಯರು ಭಯಗೊಂಡಿದ್ದಾರೆ. ಬೇಸಿಗೆ ಸಮಯವಾದ ಕಾರಣ ಅರಣ್ಯದಲ್ಲಿ ಮೇವಿಗೆ ಕೊರತೆಯಾಗಿರುವ ಕಾರಣ ಮೇವು ಹಾಗೂ ನೀರನ್ನು ಅರಸಿಕೊಂಡು ಕಾಡಾನೆಗಳು ನಾಡಿನತ್ತ ಧಾವಿಸುತ್ತಿವೆ. ಹೀಗಾಗಿ ಯಾವಾಗ? ಎಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನುವುದನ್ನು ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಏನೇ ಆದರೂ ಜನ ಎಚ್ಚರವಾಗಿರುವುದು ಒಳಿತು.