ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯ ತೊಡಿಕಾನದ ಮಲ್ಲಿಕಾರ್ಜುನ ದೇಗುಲಕ್ಕೂ ಕೊಡಗಿನ ತಲಕಾವೇರಿಗೂ ತಲತಲಾಂತರದ ಸಂಬಂಧವಿದೆ. ತುಲಾಸಂಕ್ರಮಣದ ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಆ ಬಗ್ಗೆ ಹೇಳಲೇ ಬೇಕಾಗಿದೆ.
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೂ ಕೊಡಗಿನ ತಲಕಾವೇರಿಗೂ ನೇರ ಸಂಬಂಧಗಳಿವೆ. ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆ ಮೊದಲು ತೆಗೆದಿಡುತ್ತಾರೆ. ದೇಗುಲದಿಂದ ಅರ್ಚಕರು ತಲಕಾವೇರಿಗೆ ತೆರಳಿ, ತೀರ್ಥ ತಂದು, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡುತ್ತಾರೆ.
ಹಿಂದಿನ ಕಾಲದಲ್ಲಿ ಅಕ್ಟೋಬರ್ ತಿಂಗಳ ತುಲಾಸಂಕ್ರಮಣದಂದು ಘಟಿಸುವ ತಲಕಾವೇರಿಯಲ್ಲಿನ ತೀರ್ಥೋದ್ಭವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗದ ಭಕ್ತರು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಹೀಗೆ ತೆರಳುವವರು ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ ವಿಶ್ರಾಂತಿ ಪಡೆದು, ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ತಲಕಾವೇರಿಯನ್ನು ತಲಪುತ್ತಿದ್ದರು. ಅದರಂತೆ ಕಾವೇರಿ ಜಾತ್ರೆಯ ಮುನ್ನಾ ದಿನ ತೊಡಿಕಾನ ದೇವಸ್ಥಾನದಲ್ಲಿ ಕೊಪ್ಪರಿಗೆ ಏರಿಸುವ ಸಂಪ್ರದಾಯವಿದೆ.
ತೊಡಿಕಾನವು ತಲಕಾವೇರಿಯಿಂದ ಒಂಬತ್ತು ಕಿ.ಮೀ.ದೂರದಲ್ಲಿದ್ದು ಸಂಪರ್ಕಿಸುವ ರಸ್ತೆಯು ಅರಣ್ಯ ಪ್ರದೇಶಕ್ಕಾಗಿ ಹಾದು ಹೋಗುತ್ತಿದ್ದು, ಇದರಲ್ಲಿ ಎರಡು ಕಿ.ಮೀ. ವನ್ಯಜೀವಿ ವಿಭಾಗ, ಎರಡು ಕಿ.ಮೀ. ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕೆಂದು ಮೊದಲು ತೆಗೆದಿಡಲಾಗುತ್ತದೆ.
ಈ ತೀರ್ಥವನ್ನು ಕೊಂಡೊಯ್ಯಲು ಹಿಂದಿನ ಕಾಲದಲ್ಲಿ ಅರ್ಚಕರು ತಲಕಾವೇರಿಗೆ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರಂತೆ ಆದರೆ ಈಗ ವಾಹನಗಳಲ್ಲಿ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಬಂದು ಕಾವೇರಿ ತೀರ್ಥ ಕೊಂಡೊಯ್ದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.
ಹಿಂದೆ ಕುಂದಾಪುರ ಮುಂತಾದ ಕಡೆಗಳಿಂದಲೂ ಭಕ್ತರು ಕಾವೇರಿ ಜಾತ್ರೆಗೆ ಕಾಲ್ನಡಿಗೆಯಲ್ಲಿ ಬರುತ್ತಿದ್ದರಂತೆ ಹಾಗೆ ಬರುತ್ತಿದ್ದವರು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ರಾತ್ರಿ ಕಳೆದು, ದೇವರ ದರ್ಶನ ಹಾಗೂ ವಿಶ್ರಾಂತಿ ಪಡೆದು ಆ ನಂತರ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ತಲಕಾವೇರಿಯನ್ನು ತಲಪುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ತೊಡಿಕಾನವು ಬೆಟ್ಟಗುಡ್ಡ, ತೋಟಗಳ ನಡುವಿನ ಪವಿತ್ರ ಕ್ಷೇತ್ರವಾಗಿದೆ. ಸುಂದರ ಮಲ್ಲಿಕಾರ್ಜುನ ದೇಗುಲ, ಮತ್ಸ್ಯ ತಟಾಕ, ದೇವರಗುಂಡಿ ಜಲಪಾತ ಇಲ್ಲಿನ ವಿಶೇಷವಾಗಿದೆ. ಬೆಟ್ಟಗುಡ್ಡಗಳ ಬುಡದಲ್ಲಿದ್ದು, ದಟ್ಟವಾದ ಕಾಡಿನಿಂದ ಕೂಡಿದ ಕಾರಣ ಇದು “ತಡಿ” ಅಂದರೆ ತಪ್ಪಲು “ಕಾನ” ಅಂದರೆ ಕಾಡು. ಒಟ್ಟಾಗಿ ‘ತಡಿಕಾನ’ವಾಗಿದ್ದು, ಕ್ರಮೇಣ ಬಾಯಿಯಿಂದ ಬಾಯಿಗೆ ಉಚ್ಛಾರಣೆ ಮಾಡುವಲ್ಲಿ ತೊಡಿಕಾನವಾಗಿರಬಹುದೆಂದು ಹೇಳಲಾಗುತ್ತಿದೆ.