ವೀರನಹೊಸಹಳ್ಳಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಹಸು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಜಿ.ಹೆಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಿಲ್ಲೇನ ಹೊಸಹಳ್ಳಿ ಉದ್ದುಂ ಎಂಬವರು ಕೆ.ಜಿ.ಹೆಬ್ಬನಕುಪ್ಪೆ ಗ್ರಾಮದಲ್ಲಿರುವ ತಮ್ಮ ಸಪೋಟ ತೋಟದಲ್ಲಿರುವ ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಾಕಿದ್ದರು. ಸೋಮವಾರ ಬೆಳಗಿನ ಜಾವ ಹುಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ದಾಳಿ ನಡೆಸಿದೆ. ಹುಲಿ ದಾಳಿಯಿಂದ ಗಾಬರಿಗೊಂಡ ಹಸು ಕಟ್ಟಿದ್ದ ಹಗ್ಗವನ್ನು ತುಂಡರಿಸಿ ಹೊರ ಬಂದಿದೆ. ಆದರೂ ಹುಲಿ ಹಸುವಿನ ಮೇಲೆ ಮತ್ತೆ ದಾಳಿ ನಡೆಸಿದೆ.
ಆದರೆ, ಹಸು ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸಿ ಕೊನೆಗೂ ಹುಲಿ ಬಾಯಿಂದ ಪಾರಾಗಿದೆ. ಮುಂಜಾನೆ ಹಾಲು ಕರೆಯಲು ಮನೆಯವರು ತೆರಳಿದ್ದ ವೇಳೆ ಹುಲಿ ಕಾಡಿನತ್ತ ಓಡಿಹೋಗಿದೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಕೊಟ್ಟಿಗೆ ಹಾಗೂ ಹುಲಿ ಮತ್ತು ಹಸು ಸೆಣಸಾಟ ನಡೆಸಿರುವ ಸ್ಥಳ ಪರಿಶೀಲನೆ ನಡೆಸಿ ಹಸುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಈ ಭಾಗದಲ್ಲಿ ಆಗಾಗ್ಗೆ ಹುಲಿ, ಚಿರತೆಗಳು ಜನ ಜಾನುವಾರುಗಳ ಮೇಲೆ ದಾಳಿ ನಡೆಸಿ ಕಾಡಂಚಿನ ಜನರನ್ನು ಭಯ ಭೀತಿಗೊಳಿಸುತ್ತಿವೆ. ಹುಲಿಯ ಭಯದಿಂದ ಜನರು ಓಡಾಡಲು ಹೆದರುತ್ತಿದ್ದು, ಶೀಘ್ರದಲ್ಲಿ ಬೋನು ಇಟ್ಟು ಹುಲಿ ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಯನ್ನು ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಉದ್ದುಂ ಒತ್ತಾಯಿಸಿದ್ದಾರೆ.