ಸೋಮವಾರಪೇಟೆ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬವೆಂದು ಬಸವಾ ಪಟ್ಟಣ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಬಣ್ಣಿಸಿದರು.
ಯಡೂರು ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ, ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಶಿವಕುಮಾರ ಸ್ವಾಮೀಜಿ 116 ನೆ ಜನ್ಮಜಯಂತಿ,ಸರಸ್ವತಿ ಪೂಜೆ ಹಾಗೂ ಕಾಲೇಜು ಸಂಸ್ಥಾಪಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ದೀಪಾವಳಿ,ಯುಗಾದಿ ಹೇಗೆ ಹಬ್ಬವಾಗುತದೆಯೋ ಅದೇರೀತಿ ಚುನಾವಣೆಯೂ ಪ್ರಜಾಪ್ರಭುತ್ವದ ಹಬ್ಬವಾಗಬೇಕು ಎಂದು ಬಣ್ಣಿಸಿದರು. ಇಂದಿನ ವಿದ್ಯಾರ್ಥಿಗಳು ರಾಷ್ಟ್ರದ ಭವ್ಯ ಪ್ರಜೆಗಳು ಆದ್ದರಿಂದ ಯಾರೂ ತಪ್ಪಿಸಿಕೊಳ್ಳದೆ ಮತದಾನ ಮಾಡಬೇಕೆಂದರು. ನನ್ನ ಒಂದು ಮತದಾನದಿಂದ ಏನಾಗುತ್ತದೆ ಎಂಬ ಭಾವನೆ ಬೇಡ ಎಂದರು. ಯಾವುದೇ ಆಮೀಷಗಳಿಗೆ ಬಲಿಯಾಗದೆ, ತಮ್ಮ ಮತಗಳನ್ನು ಮಾರಿಕೊಳ್ಳದೆ ನಿಮ್ಮ ಹಕ್ಕನ್ನು ಚಲಾಯಿಸಿ ಎಂದರು.
ಮಗಳನ್ನು ಮತವನ್ನು ನೀಡುವಾಗ ಯೋಗ್ಯರಿಗೆ ಕೊಡಬೇಕು.ಅಳಿಯ ಒಳ್ಳೆಯವನಾದರೆ ಮಗಳು ಚೆನ್ನಾಗಿ ಇರುತ್ತಾಳೆ,ಯೋಗ್ಯ ಜನಪ್ರತಿನಿಧಿಯಿಂದ ರಾಜ್ಯ,ದೇಶ ಚೆನ್ನಾಗಿರುತ್ತದೆ,ಪ್ರಜೆಗಳು ನೆಮ್ಮದಿಯಿಂದ ಇರುತ್ತಾರೆ ಎಂದರು.
ಇಂದು ಕಾಯಕಯೋಗಿ,ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜನ್ಮದಿನ ನಾಡಿನಾದ್ಯಂತ ಆಚರಿಸುತ್ತಿದ್ದೇವೆ ಸಿದ್ದಗಂಗಾ ಮಠದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಕ್ಕಳಿಗೆ ಆಶ್ರಯನೀಡಿ ವಿದ್ಯಾದಾನ ಮಾಡಲಾಗುತ್ತಿದೆ, ಲಕ್ಷಾಂತರ ಮಂದಿ ವಿದ್ಯಾವಂತರಾಗಿದ್ದಾರೆ.ಅನೇಕ ಮಂದಿ ಉನ್ನತ ಸ್ಥಾನದಲ್ಲಿದ್ದಾರೆ ಎಂದ ಅವರು ಶ್ರೀ ಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಇಂದು ವಿದ್ಯೆಯ ಅಧಿದೇವತೆ ಸರಸ್ವತಿ ಪೂಜೆ ನಡೆಸಿದ್ದಿರಿ ದೇವರ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ ಹಾಗೆಯೇ ಕಾಲೇಜು ಸಂಸ್ಥಾಪಕರುಗಳನ್ನು ಕರೆಯಿಸಿ ಕೃತಜ್ಞತೆ ಸಲ್ಲಿಸಿರುವುದು ಅಭಿನಂದನಾರ್ಹ ಕಾರ್ಯವೆಂದರು.
ಕಾರ್ಯಕ್ರಮದಲ್ಲಿ ಕಾಲೇಜು ಸಂಸ್ಥಾಪಕ ಸಮಿತಿ ಕಾರ್ಯದರ್ಶಿ ಎ.ಪಿ.ಶಂಕರಪ್ಪ ಹಾಗೂ ಶಾರದಮ್ಮ ದಂಪತಿಗಳು, ಸಂಸ್ಥಾಪಕ ಅಧ್ಯಕ್ಷ ರಾಗಿದ್ದ ದಿವಂಗತ ಬಿ.ಟಿ.ಚೆನ್ನಯ್ಯನವರ ಪರವಾಗಿ ಅವರ ಮೊಮ್ಮಗ ರೋಹಿತ್ ರಾಮದೇವ್ ರವರುಗಳನ್ನು ಕೃತಜ್ಞತಾ ಪೂರ್ವಕವಾಗಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಧನಲಕ್ಷ್ಮಿ ವಹಿಸಿದ್ದರು. ಶಿವಕುಮಾರ ಸ್ವಾಮೀಜಿ ಜಯಂತ್ತ್ಯೋತ್ಸವ ಸಮಿತಿ ಅಧ್ಯಕ್ಷ ಎಸ್.ಮಹೇಶ್, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶಪಾಲರಾದ ಪ್ರವೀಣ್, ಕಾಲೇಜು ಹಿಂದಿನ ಆಡಳಿತ ಮಂಡಳಿ ಸದಸ್ಯರಾದ ಎ.ಪಿ.ಶಿವರುದ್ರಪ್ಪ, ಪುಪ್ಪಯ್ಯ, ಯಡೂರು ಗ್ರಾಮ ಸಮಿತಿ ಅಧ್ಯಕ್ಷ ವೈ. ಈ. ವಿಜಯ್ ಉಪಸ್ಥಿತರಿದ್ದರು.