ಮಡಿಕೇರಿ, ಆ.1: ಭ್ರಷ್ಟಾಚಾರದ ಆರೋಪವನ್ನು ಮರೆ ಮಾಚಲು ಮತ್ತು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರ ಹಾದಿ ತಪ್ಪಿಸಲು ರಾಜ್ಯ ಬಿಜೆಪಿ ಸರ್ಕಾರ ಕೋಮು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಾತಿ ರಾಜಕಾರಣದ ಹಿಡನ್ ಅಜೆಂಡಾದ ಮೂಲಕ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಜನರು ಮುಂಬರುವ ಚುನಾವಣೆಯಲ್ಲಿ ಸರಿಯಾದ ಪಾಠವನ್ನೇ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಭಿವೃದ್ಧಿ ಬಗ್ಗೆ ಚಿಂತಿಸದೆ ಕೋಮು ಭಾವನೆ ಕೆರಳಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಅಮಾಯಕ ಯುವಕರು ಬಲಿಯಾಗಿದ್ದಾರೆ. ಪರಿಹಾರ ವಿತರಣೆಯಲ್ಲೂ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ರಾಜ್ಯದ ಎಲ್ಲಾ ಪ್ರಜೆಗಳನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿಗಳು ಒಂದು ಪಕ್ಷ ಅಥವಾ ವರ್ಗಕ್ಕೆ ಸೀಮಿತವಾದಂತೆ ವರ್ತಿಸುತ್ತಿದ್ದಾರೆ. ಸಾಮರಸ್ಯದ ಜೀವನಕ್ಕೆ ಆದ್ಯತೆ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಬಿಜೆಪಿ ಜನಪ್ರತಿನಿಧಿಗಳು ಮತ್ತಷ್ಟು ಪ್ರಚೋದನಾಕಾರಿ ಹೇಳಿಕೆ ನೀಡಿ ಅಶಾಂತಿ ಸೃಷ್ಟಿಗೆ ಕಾರಣಕರ್ತರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹತ್ಯೆಗೀಡಾದ ಯುವಕರ ಕುಟುಂಬಗಳಿಗೆ ಸಮಾನ ಪರಿಹಾರ ವಿತರಣೆ ಮಾಡದಿರುವುದು, ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ಮತ್ತು ಪರಿಹಾರ ವಿತರಣೆ ಸಂದರ್ಭ ತಾರತಮ್ಯ ಧೋರಣೆ ಅನುಸರಿಸಿರುವುದು ಖಂಡನೀಯವೆಂದು ಸರಿತಾ ಪೂಣಚ್ಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆ ಮಹಾಮಳೆ, ಪ್ರಾಕೃತಿಕ ವಿಕೋಪ, ಹದಗೆಟ್ಟ ರಸ್ತೆ ಮತ್ತು ವನ್ಯಜೀವಿಗಳ ದಾಳಿಯಿಂದ ನಲುಗಿ ಹೋಗಿದ್ದರೂ ಈ ಬಗ್ಗೆ ಚಿಂತಿಸದ ಬಿಜೆಪಿ ಮಂದಿ ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳಲು ಸಾಧ್ಯವಾಗದೆ ಜಾತಿ ರಾಜಕಾರಣದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ಜನ ಬಿಜೆಪಿ ವಿರುದ್ಧ ಜಾಗೃತರಾಗಿದ್ದು, ಮುಂದಿನ ಚುನಾವಣೆಯ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.