ಪೊನ್ನಂಪೇಟೆ: ಸಜ್ಜನರು ರಾಜಕಾರಣಕ್ಕೆ ಬರಬೇಕು, ಹಾಗದಾಗ ಮಾತ್ರ ರಾಜಕೀಯ ಕ್ಷೇತ್ರ ಶುದ್ಧಿಕರಣವಾಗಲಿದೆ ಮತ್ತು ಜನರು ರಾಜಕಾರಣಿಗಳ ಮೇಲೆ ವಿಶ್ವಾಸವಿರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎ. ಎಸ್.ಪೊನ್ನಣ್ಣ ಜಿಲ್ಲೆಯ ರಾಜಕೀಯಕ್ಕೆ ಆಶಾಕಿರಣ ಎಂದು ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಭಿಪ್ರಾಯ ಪಟ್ಟರು.
ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಮಂಗಳವಾರ ಅವರು ಮತ್ತು ಕೆ.ಪಿ.ಸಿ.ಸಿ.ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು. “ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ”.ಆದರೆ ಎ.ಎಸ್ .ಪೊನ್ನಣ್ಣ ಅವರ ಸಜ್ಜನ ವ್ಯಕ್ತಿತ್ವ ,ಮಾನವೀಯತೆ, ಸಮಾಜಸೇವೆ ಮತ್ತು ಅವರು ಜನರಿಗೆ ಮಾಡುತ್ತಿರುವ ಸಹಾಯವನ್ನು ಮನಗಂಡು ಅವರ ಮೇಲೆ ಅಭಿಮಾನ ಮೂಡಿದೆ. ಅಧಿಕಾರ ಇಲ್ಲದೆಯೇ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿರುವ ಪೊನ್ನಣ್ಣ ಅವರನ್ನು ಅಧಿಕಾರಕ್ಕೆ ತಂದರೆ ಜಿಲ್ಲೆಯ ಜ್ವಲಂತ ಸಮಸ್ಯೆ, ಜನರ ಬಹುಕಾಲದ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬ ಭರವಸೆಯಿಂದ ಅವರಿಗಾಗಿ ಕೆಲಸ ಮಾಡಲು ಮುಂದಾಗಿರುವುದಾಗಿ ಹೇಳಿದರು. ಜಿಲ್ಲೆಯಲ್ಲಿ ದ್ವೇಷ ಮತ್ತು ಅನೈತಿಕ ರಾಜಕಾರಣ ಹೆಚ್ಚಾಗಿದೆ ಪೊನ್ನಣ್ಣ ಅವರಂಥ ಸಜ್ಜನರು ರಾಜಕೀಯ ಪ್ರವೇಶದಿಂದ ಶುದ್ಧಿಕರಣವಾಗಲಿದೆ ಎಂದರು.
ಅಜ್ಜಿಕುಟ್ಟಿರ.ಎಸ್. ಪೊನ್ನಣ್ಣ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಕಟ್ಟುತ್ತಿದ್ದು, ಸಾಮೂಹಿಕ ನಾಯಕತ್ವದಿಂದಲೇ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಜಿಲ್ಲೆಯ ಕಂದಾಯ ಇಲಾಖೆಯ ಭ್ರಷ್ಟಾಚಾರ ಹೆಚ್ಚಾಗಿದೆ, ಜನರ ಯಾವುದೇ ಕೆಲಸ ಆಗುತ್ತಿಲ್ಲ. ಜನರು ಬಹುಕಾಲದಿಂದ ತಮ್ಮ ಕಡತ ವಿಲೇವಾರಿಗೆ ಅಲೆದಾಡುತ್ತಿದ್ದಾರೆ. ಮಾನವ-ವನ್ಯಪ್ರಾಣಿ ಸಂಘರ್ಷ, ವಿದ್ಯುತ್ ಸಮಸ್ಯೆಗೆ ಪರಿಹಾರ ಕಾಣಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.
ಈ ಸಂದರ್ಭ ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಬಾಲಕೃಷ್ಣ,ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್,ಉಪಾಧ್ಯಕ್ಷ ಕಾಳಿಮಾಡ ಪ್ರಶಾಂತ್,ಬ್ಲಾಕ್ ಮಹಿಳಾ ಅಧ್ಯಕ್ಷೆ ಕೋಳೆರ ಭಾರತಿ,ಡಿಸಿಸಿ ಸದಸ್ಯ ಚೊಟ್ಟೆಯಾಂಡಮಾಡ ವಿಶು, ಮುಕ್ಕಾಟೀರ ಸಂದೀಪ್,ಪೆಮ್ಮಂಡ ರಾಜಾ ಕುಶಾಲಪ್ಪ,ಮಾಜಿ ಜಿ.ಪಂ.ಸದಸ್ಯ ಮೂಕಳೇರ ಕುಶಾಲಪ್ಪ,ತಾ.ಪಂ.ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ,ವಲಯ ಮಹಿಳಾ ಅಧ್ಯಕ್ಷೆ ಹೇಮಾ ನಾಣಯ್ಯ,ಹುದಿಕೇರಿ ವಲಯ ಅಧ್ಯಕ್ಷ ಚಂಗುಲಂಡ ಸೂರಜ್, ಎ.ಎಸ್.ಕಾರ್ಯಪ್ಪ,ವಲಯ ಎಸ್.ಟಿ. ಘಟಕ ಅಧ್ಯಕ್ಷ ಜಗದೀಶ್,ಪಿ.ಕೆ.ಚುಬ್ರ,ಗೋಣಿಕೊಪ್ಪ ವಲಯ ಅಧ್ಯಕ್ಷ ಪ್ರಮೋದ್ ಗಣಪತಿ ಹಾಜರಿದ್ದರು.