ಮಡಿಕೇರಿ: ಈಗಿನ ಸಮಯಕ್ಕೆ ಕಾಗದ ಮುದ್ರಣದ ನಡುವೆ ಜನರು ನೆಚ್ಚಿಕೊಂಡಿರುವುದು ತಂತ್ರಜ್ಞಾನವನ್ನು, ಮಾಹಿತಿ,ಕಥೆ ಕಾದಂಬರಿಗಳ ಪುಸ್ತಕದ ನಡುವೆ ಇನ್ನೂ ಹೆಚ್ಚಿನ ಜನರನ್ನು ತಲುಪಲು ಡಿಜಿಟಲೀಕರಣ ಅತ್ಯಗತ್ಯ. ಹೀಗಾಗಿ ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯು ಡಿಜಿಟಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ದಶಮಾನೋತ್ಸವವವನ್ನು ಆಚರಿಸುತ್ತಿರುವ ಅಕಾಡಮಿಯು ಅರೆಭಾಷಾ ಸಾಹಿತ್ಯದ ಪತ್ರಿಕೆಗಳು ಹಾಗೂ ಕೃತಿಗಳು ಸೇರಿದಂತೆ ಹಲವಾರು ಮೌಲಿಕ ಸಾಹಿತ್ಯವನ್ನು ಒಳಗೊಂಡ 84 ಕೃತಿಗಳನ್ನು ಡಿಜಿಟಲೀಕರಣಗೊಳಿಸಿ ಅಂತರ್ಜಾಲದಲ್ಲಿ ಪ್ರಕಟಿಸಿವು ಮೂಲಕ ಅರೆಭಾಷಾ ಸಾಹಿತ್ಯವನ್ನು ವಿಶ್ವದಾದ್ಯಂತ ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರವಹಿಸಿದೆ.
ಅರೆಭಾಷಾ ಸಾಹಿತ್ಯವು ಎಲ್ಲಾ ಜನರಿಗೆ ಉಚಿತವಾಗಿ ಓದುವಂತಾಗಬೇಕು. ಕೊಡಗು ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಕೇಳಿ ಬರುವ ಅರೆಭಾಷೆ ಇಡೀ ದೇಶದ ಜನರನ್ನು ತಲುಪಬೇಕು ಎನ್ನುವುದು ಇದರ ಉದ್ದೇಶವಾಗಿದೆ.
ಈ ಅಕಾಡಮಿಯು ಪ್ರಕಟಿಸಿದ 38 ಪುಸ್ತಕಗಳು, ವಿವಿಧ ಲೇಖಕರ ಕನ್ನಡ, ಇಂಗ್ಲೀಷ್ನ 21ಪುಸ್ತಕಗಳು, ಹಿಂಗಾರ ತ್ರೈಮಾಸಿಕದ 23 ಕೃತಿಗಳು ಹಾಗೂ ಪಟ್ಟಡ ಪ್ರಭಾಕರ ಅವರು ಸಂಪಾದಿಸಿದ ಕೊಡಗು ಸಂಗಾತಿ ಪಾಕ್ಷಿದ 142 ಸಂಚಿಕೆಗಳು ಹಾಗೂ ಅರೆಭಾಷೆ ಹಾಗೂ ಅರೆಭಾಷೆಯ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳು ಡಿಜಿಟಲೀಕರಣಗೊಳ್ಳಲಿವೆ.
1968ರಲ್ಲಿ ಕೊಡಗು ಗೌಡ ಸಮಾಜ ಬೆಂಗಳೂರು ಪ್ರಕಟಿಸಿದ ಗೌಡ ಸಂಸ್ಕೃತಿ ಯಿಂದ ಇತ್ತೀಚೆಗಿನ ಅಕಾಡೆಮಿ ಪ್ರಕಟಿತ ಪುಸ್ತಕಗಳಿವೆ. ಅರೆಭಾಷೆ ಮತ್ತು ಅರೆಭಾಷೆ ಪರಿಸರದಕ್ಕೆ ಸಂಬಂಧಪಟ್ಟ ಸಂಪ್ರಬಂಧಗಳು, ಪ್ರೌಢಪ್ರಬಂಧಗಳು, ಪದಕೋಶ, ವ್ಯಾಕರಣ, ಕತೆ, ಜನಪದ ಕತೆ, ಕವಿತೆ, ನಾಟಕ, ಸ್ಮರಣಸಂಚಿಕೆಗಳು, ಇತಿಹಾಸ ಪುಸ್ತಕಗಳಿವೆ. ಮುಖ್ಯವಾಗಿ ಕೊಡಗು ಗೌಡ ಸಮಾಜ ೧೯೬೮ರಲ್ಲಿ ಪ್ರಕಟಿಸಿದ ಗೌಡ ಸಂಸ್ಕೃತಿ , ೧೯೭೦ರಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಪ್ರಕಟಿಸಿದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಸಂಸ್ಕೃತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ (ರಿ) ಮಂಗಳೂರು ಪ್ರಕಟಿಸಿದ ಗೌಡ ಜನಾಂಗ – ಇತಿಹಾಸ ಮತ್ತು ಸಂಸ್ಕೃತಿ, ಸಂಪಾಜೆಯ ಎನ್.ಎಸ್. ದೇವಿಪ್ರಸಾದರ ʼಅಮರ ಸುಳ್ಯದ ಸ್ವಾತಂತ್ರ್ಯ ಸಮರʼ, ಪ್ರೊ. ಕೋಡಿ ಕುಶಾಲಪ್ಪ ಗೌಡರ ʼಗೌಡ ಕನ್ನಡʼ, ಕೆ. ಅರ್. ಗಂಗಾಧರರ ಅರೆಭಾಷೆ-ಕನ್ನಡ-ಇಂಗ್ಲಿಷ್ ಶಬ್ಧಕೋಶ, ಡಾ ವಿಶ್ವನಾಥ ಬದಿಕಾನರ ಅರೆಭಾಷೆಯ ಜನಪದ ಕತೆಗಳು, ಡಾ. ಪುರುಷೋತ್ತಮ ಬಿಳಿಮಲೆಯವರ ‘ಕರಾವಳಿ ಜಾನಪದʼವೆಂಬ ಪುಸ್ತಕಗಳು https://arebashe.sanchaya.net/ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ವೆಬ್ ಸೈಟ್ನಲ್ಲಿ ಸಿಗಲಿರುವ ಎಲ್ಲಾ ಪುಸ್ತಕಗಳು ಲೇಖಕರಿಂದ, ಪ್ರಕಾಶಕರಿಂದ ಹಾಗೂ ಸಂಪಾದಕರಿಂದ ಕೃತಿ ಸ್ವಾಮ್ಯವನ್ನು ಪಡೆದುಕೊಂಡು ಪ್ರಕಟಿಸಿದ್ದೇವೆ. ಬೆಂಗಳೂರಿನ ಸಂಚಯ ಫೌಂಢೇಶನ್ ನೊಂದಿಗೆ ಸೇರಿ ಪುಸ್ತಕ ಡಿಜಿಟಲೀಕರಣವನ್ನು ಕೈಗೊಂಡಿದ್ದೇವೆ. ಕ್ರಿಯೇಟಿವ್ ಕಾಮನ್ಸ್ ಶೇರ್ ಅಲೈಕ್ ಸಿಸಿ ಬೈ ಎಸ್ ಎ ಲೈಸೆನ್ಸ್ ನಡಿ ಎಲ್ಲರಿಗೂ ಓದಲು ಲಭ್ಯವಿದೆ. ನಮಗೆ ಬೇಕಾದರೆ ಪುಸ್ತಕಗಳನ್ನು ಡೌನ್ಫೋಡ್ ಮಾಡಿಯೂ ಬಳಸಬಹುದು. ಆದರೆ, ಖಾಸಗಿ ಉದ್ದೇಶಕ್ಕೆ ಬಳಸುವಂತಿಲ್ಲ. ಎಂದು ಅಕಾಡಮಿ ಸದಸ್ಯ ಭರತೇಶ ಅಲಸಂಡೆಮಜಲು ಮಾಹಿತಿ ನೀಡಿದರು.
ಡಿಜಿಟಲ್ ಪುಸ್ತಕಗಳ ಲೋಕಾರ್ಪಣೆ ಯು ಶನಿವಾರ ಬೆಳಗ್ಗೆ 11ಕ್ಕೆ ಭಾರತಿ ವಿದ್ಯಾ ಭವನ ಮಡಿಕೇರಿಯಲ್ಲಿ ನಡೆಯಲಿದೆ. ಪುಸ್ತಕ ಬಿಡುಗಡೆಯನ್ನು ಬೋಳೂರು ಸುದರ್ಶನ, ಮಾನ್ಯ ಮುಖ್ಯಮಂತ್ರಿಗಳ ಸಲಹೆಗಾರರು, ಇ-ಆಡಳಿತ, ಕರ್ನಾಟಕ ಸರ್ಕಾರ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆ ಗದ್ದೆ ಇವರು ವಹಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕರಾದ ಎಂ ಪಿ ಕೇಶವ ಕಾಮತ್, ಕೊಡಗು ಗೌಡ ಸಮುದಾಯಗಳ ಒಕ್ಕೂಟ ಮಡಿಕೇರಿ ಇದರ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಹಾಗೂ ಕೊಡಗು ಗೌಡ ಸಮಾಜ ಮೈಸೂರು ಇದರ ಅಧ್ಯಕ್ಷರಾದ ತೋoಟ ಬೈಲು ಈ ಮನೋಹರ್ ಭಾಗವಹಿಸಲಿದ್ದಾರೆ.