ಮಡಿಕೇರಿ: ಕೊಡಗಿನಲ್ಲಿ ಎರಡು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರು ಹುಲಿ ದಾಳಿಗೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಇಂತಹ ಆಘಾತಕಾರಿ ಬೆಳವಣಿಗೆಯ ಮುನ್ಸೂಚನೆ ಇದ್ದರೂ ಕೂಡಾ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಬೇಸರದ ವಿಷಯವೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್.ಪೊನ್ನಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಲ್ಲೆರಿಯ ರಾಜು ಅವರು ಸೋಮವಾರ ಹುಲಿ ದಾಳಿಗೆ ಬಲಿಯಾಗಿದ್ದರೇ, ಭಾನುವಾರ ಅವರ ಮೊಮ್ಮಗ ಚೇತನ್ ಹುಲಿ ದಾಳಿಗೆ ಬಲಿಯಾಗಿ ಅವರ ತಂದೆ ಮಧು ಕೂಡ ಗಾಯಗೊಂಡಿದ್ದಾರೆ. ಈ ಕುಟುಂಬದ ಇಂದಿನ ಧಾರುಣ ಸ್ಥಿತಿಯಲ್ಲಿ ನಮ್ಮೆಲ್ಲರ ಬೆಂಬಲದ ಅವಶ್ಯಕತೆ ಆ ಕುಟುಂಬಕ್ಕಿದೆ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಕೊಡಗಿನಲ್ಲಿ ದಿನದಿಂದ ದಿನಕ್ಕೆ ಮನುಷ್ಯರ ಮೇಲೆ, ರೈತರ ಬೆಳೆಗಳ ಮೇಲೆ ವನ್ಯಮೃಗಗಳ ದಾಳಿ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ದೊಕಬೇಕು. ವನ್ಯಮೃಗಗಳ ದಾಳಿ ನಡೆಸಿದ ಸಂದರ್ಭದಲ್ಲಿ ಮಾತ್ರ ಅರಣ್ಯ ಇಲಾಖೆ ಚುರುಕಾಗುವುದು ಸರಿಯಲ್ಲ. ಸ್ಥಳದಲ್ಲಿ ಆಡಳಿತದ ಯಾವುದೇ ಪ್ರತಿನಿಧಿ, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಬರದೇ ಇರುವುದೇ ಒಂದು ಸೋಜಿಗ. ಹಲವಾರು ವರ್ಷಗಳಿಂದ ಜನರು ಕೊಟ್ಟಿರುವ ಮನವಿಗಳನ್ನು ಇನ್ನಾದರೂ ಪರಿಗಣಿಸಿ ವನ್ಯ ಜೀವಿಗಳ ದಾಳಿಯನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕೆಂದು ಎ.ಎಸ್.ಪೊನ್ನಣ್ಣ ಒತ್ತಾಯಿಸಿದ್ದಾರೆ.