ಮಡಿಕೇರಿ, ಸೆ.27: ಒಂದು ಜನಾಂಗ ಉಳಿಯಬೇಕಾದರೆ ಆ ಜನಾಂಗದ ಸಂಸ್ಕೃತಿ, ಆಚಾರ- ವಿಚಾರ, ಪದ್ಧತಿ, ಪರಂಪರೆಗಳು ಜೀವಂತವಾಗಿರಬೇಕು. ಈ ನಿಟ್ಟಿನಲ್ಲಿ ಕೊಡವ ಸಮುದಾಯದಲ್ಲಿ ವಧು ವರರ ಅನ್ವೇಷಣೆ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ “ತಂದ್ ಬೆಂದುಕಾರಡ ಮೋಪ್ ಕೂಟ” ಕಾರ್ಯಕ್ರಮದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಜನಾಂಗದ ಹಿತದೃಷ್ಟಿಯಿಂದ ಮೂಲ ಸಂಪ್ರದಾಯವನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ನಿಟ್ಟಿನಲ್ಲಿ ಹಲವರು ಚರ್ಚಿಸಿದರು.
ಎಲ್ಲಾ ಕೊಡವ ಸಮಾಜದಲ್ಲಿ ತಂದ್- ಬೆಂದು ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಆಯಾ ಭಾಗದಲ್ಲಿನ ವಧು-ವರರ ಅನ್ವೇಷಣೆಗೆ ಸಹಕಾರಿಯಾಗುವಂತೆ ಕಾರ್ಯೋನ್ಮುಖವಾಗಬೇಕು. ಪ್ರತಿಯೊಂದು ಕೊಡವ ಸಮಾಜ ಕೊಡವ ಸಮುದಾಯದ ಕೇಂದ್ರ ಬಿಂದುವಾಗಿದ್ದು, ವಧು-ವರರಿಗೆ ಸಹಾಯವಾಗುವಂತಹ ನಿಟ್ಟಿನಲ್ಲಿ ತಂದು ಬೆಂದು ವಿಭಾಗವನ್ನು ತೆರೆಯುವಂತೆಯೂ, ತಿಂಗಳಲ್ಲಿ ಒಂದು ದಿನ ಇಂತಹ ವಧು-ವರರ ದಾಖಲಾತಿಯನ್ನು ಮಾಡುವುದು. ಕೊಡವ ಸಮಾಜದಲ್ಲಿ ನಡೆಯುವ ಕೊಡವ ಸಾರ್ವಜನಿಕ ಕಾರ್ಯಕ್ರಮದಲ್ಲಿ “ತಂದ್ ಬೆಂದು” ಆಯೋಜನೆ ಮಾಡುವುದು. ಈ ಕಾರ್ಯಕ್ರಮವನ್ನು ಕೇಂದ್ರೀಕೃತ ಮಾಡಿ ಪ್ರತಿ ಕೊಡವ ಸಮಾಜದಲ್ಲಿ ವಧು-ವರ ಅನ್ವೇಷಣಕಾರರ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ಪ್ರತಿಯೊಬ್ಬ ವಧು ವರರ ಪೊಷಕರಿಗೆ ಸಿಗುವಂತೆ ನೋಡಿಕೊಳ್ಳಬೇಕೆಂದು ಎಲ್ಲಾ ಕೊಡವ ಸಮಾಜದ ಆಡಳಿತ ಮಂಡಳಿ ಬಳಿ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಮನ ಒಪ್ಪಿದರೆ ಗಣ ಒಪ್ಪಿ ಬರುತ್ತದೆ ಎಂದು ಹಿಂದಿನವರು ನಂಬಿದ್ದರು, ಆದರೆ ಇಂದು ವಧು ವರರ ಜಾತಕ, ಸಂಖ್ಯೆ ಮುಂತಾದ ವಿಷಯಗಳು ತಾಳೆ ಬರುತ್ತಿಲ್ಲ. ಇದರಿಂದ ಸಾಕಷ್ಟು ಮದುವೆಗಳು ಮುಂದೂಡಲ್ಪಡುತ್ತಿವೆ. ಇದು ಒಂದು ವ್ಯವಸ್ಥಿತ ಸಂಚು ಎಂಬಂತೆ ಕಂಡು ಬರುತ್ತಿದ್ದು, ಇನ್ನಾದರೂ ಸಮಾಜ ಬಾಂಧವರು ಈ ವಿಷಯದಲ್ಲಿ ಹೆಚ್ಚಿನ ಜಾಗರೂಕತೆಯಿಂದ ಇರಬೇಕು. ಇಂತಹ ವಿಷಯದಲ್ಲಿ ಹಿರಿಯರೊಂದಿಗೆ ಹಾಗೂ ತಿಳಿದವರೊಂದಿಗೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಪ್ರಶಸ್ತಿ ನೀಡಲಾಗುವುದು
ಸೆ.26 ರಿಂದ ಡಿ.20ನೇ ತಾರೀಖಿನ ಒಳಗೆ ಅತಿ ಹೆಚ್ಚು ತಂದ್ ಬೆಂದು ಕಾರ್ಯಕ್ರಮವನ್ನು ಆಯೋಜಿಸಿ ದಾಖಲಾತಿಯನ್ನು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ನ ಕಚೇರಿಗೆ ತಲುಪಿಸಿದರೆ ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ನಡೆಯುವ ಪುತ್ತರಿ ಸಾಂಸ್ಕೃತಿಕ ದಿನಾಚರಣೆ ದಿನದಂದು “ನಾಟ್ ಕುಂಜ್ಞಪ್ಪ ಮತ್ತು ನಾಟ್ ಕುಂಜ್ಞವ್ವ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಘೋಷಣೆ ಮಾಡಿದರು.
ಕೊಡವ ಕ್ಲಾನ್ ಡಾಟ್ ಕಮ್ ನ ಮಾಲೀಕ ಗುಮ್ಮಟಿರ ಕಿಶು ಉತ್ತಪ್ಪ ಮಾತನಾಡಿ ಇದೇ ಡಿ.25 ರಂದು ನಡೆಸಲಿರುವ “ವ್ಲಾರ್ಡ್ ಲಾರ್ಜೆಸ್ಟ್ ಪ್ಯಾಮಿಲಿ ಗ್ಯಾದರ್” ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಘಟನೆಯ ವತಿಯಿಂದ ವಧು-ವರರ ಅನ್ವೇಷಣೆಗೆ ಒಂದು ಸ್ಟಾಲನ್ನು ಉಚಿತವಾಗಿ ನೀಡುವುದಾಗಿಯೂ ಮತ್ತು ಕೊಡವ ಕ್ಲಾನ್ ವೆಬ್ ಸೈಟ್ ನಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರ ವಧು ವರರ ಅನ್ವೇಷಣಾ ಶುಲ್ಕವನ್ನು ಡಿ.24ರ ವರೆಗೆ ಉಚಿತವಾಗಿ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಘಟನೆಯ ಪ್ರಮುಖರಾದ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ, ಮಾಚಿಮಾಡ ರವೀಂದ್ರ, ಜಮ್ಮಡ ಗಣೇಶ್ ಅಯ್ಯಣ್ಣ, ಮಾಳೆಟೀರ ಶ್ರೀನಿವಾಸ್, ಅಪ್ಪಂಡೇರಂಡ ಯಶವಂತ್ ಕಾಳಪ್ಪ, ಬಲ್ಲಡಿಚಂಡ ರನ್ನು, ಉಳುವಂಗಡ ಲೋಹಿತ್ ಭೀಮಯ್ಯ, ಅಚ್ಚಂಡೀರ ಪವನ್ ಪೆಮ್ಮಯ್ಯ, ಕೊಕ್ಕಲೇರ ಶ್ಯಾಂ, ಶಾಂತೆಯಂಡ ನಿರನ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ನಿರ್ದೇಶಕರಾದ ಮೂಕಳೇರ ಕಾವ್ಯ, ಚೀರಂಡ ಕಂದಾ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ. ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 60 ವಧು-ವರ ಅನ್ವೇಷಣಕಾರರು, ವಧು ವರರ ಪೋಷಕರು, ಹಾಗೂ ಸಮಾಜದ ಬಂಧುಗಳು ಭಾಗವಹಿಸಿದ್ದರು.