ಮಡಿಕೇರಿ: ಕೊಡಗಿನಲ್ಲಿ ಹುಲಿ ದಾಳಿಗೆ ವ್ಯಕ್ತಿಯೊಬ್ಬ ಮೃತಟ್ಟಿರುವ ಘಟನೆ ಕೋತೂರು ಗ್ರಾಮದಲ್ಲಿ ನಡೆದಿದೆ. ಬೊಮ್ಮಡ ಹಾಡಿ ನಿವಾಸಿ ಜೆ.ಕೆ.ಕೃಷ್ಣದಾಸ (52) ಮೃತಪಟ್ಟ ವ್ಯಕ್ತಿ.
ಕೋತೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದ್ದು, ಹಸುವಿನ ಮೃತ ದೇಹವನ್ನು ಹೂಳಲು ನಾಲ್ವರು ತಯಾರಿ ನಡೆಸುತ್ತಿದ್ದಾಗ ಹುಲಿ ಕೃಷ್ಣದಾಸನ ಮೇಲೆರಗಿದೆ ಎಂದು ಹೇಳಲಾಗಿದೆ.
ಕೋತೂರುವಿನ ಚೈನ್ಗೇಟ್ ಬಳಿ ಹುಲಿದಾಳಿ ಪರಿಣಾಮ ಜೆ.ಕೆ.ಕೃಷ್ಣದಾಸ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಘಟನೆಯಿಂದ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಿಗೆ ಜೀವ ಭೀತಿ ಕಾಡುತ್ತಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯ ಮತ್ತು ಹುಲಿ ಹಾವಳಿ ತಡೆಗೆ ಇಲಾಖೆ ಕ್ರಮ ಕೈಗೊಳ್ಳದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ನಾಗರಹೊಳೆ ಅಭಯಾರಣ್ಯವಿದ್ದು, ಅರಣ್ಯದಿಂದ ಹೊರ ಬಂದ ಹುಲಿ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.