ಮಡಿಕೇರಿ: ಪಿಕ್ಅಪ್ ವಾಹನದಲ್ಲಿ ಸಿಹಿಗೆಣಸು ಮೂಟೆಗಳಡಿಯಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ವಲಯ ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.
ವಾಹನ ಸಹಿತ ಚಾಲಕನನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟು 5 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿರಾಜಪೇಟೆ ತಾಲೂಕಿನ ಬೇತು ಗ್ರಾಮದ ನಿವಾಸಿ ಆರೀಸು ಎಂ.ಎ. ಬಂಧಿತ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ವಿರಾಜಪೇಟೆ ವಲಯ ಹೆಗ್ಗಳ ಶಾಖೆಯ ಕೊಟ್ಟೋಳಿ-ವಿರಾಜಪೇಟೆ ಮುಖ್ಯರಸ್ತೆ ಮಾರ್ಗವಾಗಿ ಸಿಹಿ ಗೆಣಸು ಮೂಟೆಗಳಡಿ 11 ಬೀಟೆ ಮರದ ನಾಟಾಗಳನ್ನು ಸಾಗಿಸಲಾಗುತ್ತಿತ್ತು. ವಾಹನವನ್ನು ಪರಿಶೀಲನೆ ನಡೆಸಿದ ಸಂದರ್ಭ ಅಕ್ರಮ ಮರ ಸಾಗಾಟ ಪ್ರಕರಣ ಪತ್ತೆಯಾಗಿದೆ. ಈ ವೇಳೆ ಆರೋಪಿ ಚಾಲಕ ಆರೀಸು ನನ್ನು ಬಂಧಿಸಲಾಯಿತು.
ಕೃತ್ಯದಲ್ಲಿ ಶಾಮೀಲಾಗಿರುವ ಕೊಟ್ಟಮುಡಿ ಹೊದವಾಡ ಗ್ರಾಮದ ಕೆ.ಯು.ಅಬ್ಬಾಸ್ ಹಾಗೂ ನಾಪೋಕ್ಲು ಹಳೇ ತಾಲ್ಲೂಕು ನಿವಾಸಿ ರಿಜ್ವಾನ್ ಎಂಬ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ವಶಕ್ಕೆ ಪಡೆಯಲಾದ ಒಟ್ಟು ಸ್ವತ್ತಿನ ಮೌಲ್ಯ 5 ಲಕ್ಷ ರೂ.ಗಳಾಗಿದ್ದು, ಆರೋಪಿ ವಿರುದ್ದ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.