ಮಡಿಕೇರಿ: ಕಾವೇರಿನಾಡು ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಾಕೃತಿಕ ವಿಕೋಪದ ಆತಂಕ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಪ್ರತಿಯೊಬ್ಬರು ಪ್ರಕೃತಿಯನ್ನು ಸಂರಕ್ಷಿಸಬೇಕಾಗಿದೆ. ಪರಿಸರ ರಕ್ಷಣೆ ಕೂಡ ದೇಶಾಭಿಮಾನದ ಒಂದು ಭಾಗ ಎಂದು ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಯ ರಮಣೀಯ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಕೂಡ ದೇಶಪ್ರೇಮ ಅಥವಾ ರಾಷ್ಟ್ರೀಯತೆ ಎಂದು ಅರಿತುಕೊಳ್ಳದ ಕಾರಣದಿಂದ ಪ್ರಾಕೃತಿಕ ವಿಕೋಪಕ್ಕೆ ಇಂದು ಎಲ್ಲರೂ ತಲೆಬಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಕೊಡಗು ಆತಂಕದ ಬೀಡಾಗುತ್ತಿದೆ, ಭೂಕಂಪ, ಗುಡ್ಡ ಕುಸಿತ, ಪ್ರವಾಹ ಮುಂತಾದ ವಿಕೋಪಗಳಿಂದ ಜಿಲ್ಲೆಯ ಬೆಳೆಗಾರರು, ಕೃಷಿಕರು, ಕೃಷಿ ಕಾರ್ಮಿಕರು ಹಾಗೂ ವ್ಯಾಪಾರೋದ್ಯಮದಲ್ಲಿ ತೊಡಗಿಸಿಕೊಂಡವರು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.
ಕೊಡಗನ್ನು ದಕ್ಷಿಣ ಕಾಶ್ಮೀರ, ಸ್ಕಾಟ್ಲ್ಯಾಂಡ್, ಭೂದೇವಿಯ ಸ್ವರ್ಗ ಎಂದೆಲ್ಲಾ ವರ್ಣಿಸಿ ಕೊಂಡಾಡುವ ನಾವು ಇಲ್ಲಿನ ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಕೂಡ ದೇಶಾಭಿಮಾನ ಮತ್ತು ರಾಷ್ಟ್ರೀಯತೆ ಎಂದು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಅಕ್ರಮ ಗಣಿಗಾರಿಕೆ, ಮರಳುಗಾರಿಕೆ, ಮಣ್ಣು ಸಾಗಾಟ, ಅಕ್ರಮ ಭೂ ಪರಿವರ್ತನೆ, ಅರಣ್ಯ ನಾಶ ನಮ್ಮ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ. ದೂರದೃಷ್ಟಿಯ ಕೊರತೆಯಿಂದ ಅಭಿವೃಧ್ಧಿ ಪಡಿಸಬೇಕಾದ ಪ್ರದೇಶವನ್ನು ಕಡೆಗಣಿಸಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿರುವುದೇ ಇಂದಿನ ದುರಂತಗಳಿಗೆ ಕಾರಣವಾಗಿದೆ. ಇದರಲ್ಲಿ ಅಪ್ರಾಮಾಣಿಕ ಅಧಿಕಾರಿಗಳ ಪಾಲೂ ಇದೆ ಎಂದು ಆರೋಪಿಸಿದ್ದಾರೆ.
ನಾಡು, ನುಡಿ, ಸಂಸ್ಕøತಿಯೊಂದಿಗೆ ಭೂಮಿ ಮತ್ತು ಪ್ರಕೃತಿಯನ್ನು ಉಳಿಸುವುದೂ ದೇಶಾಭಿಮಾನವೇ ಆಗಿದ್ದು, ಭೂದೇವಿಗೆ ದ್ರೋಹ ಎಸಗುವವನನ್ನು ದೇಶದ್ರೋಹಿ ಎಂದೇ ಪರಿಗಣಿಸಬೇಕಿದೆ. ಕೊಡಗಿನ ಸರ್ವ ಜನರಿಗೆ ಸಮಬಾಳು ಮತ್ತು ನಿರ್ಭೀತ ಬದುಕು ಅಗತ್ಯವಿದೆ. ದೇಶದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ “ಸಬ್ ಕ ಸಾತ್ ಸಬ್ ಕ ವಿಕಾಸ್” ಆಶಯದಂತೆ ಅಭಿವೃದ್ಧಿ ಪಥದಲ್ಲಿ ನೆಮ್ಮದಿಯ ಜೀವನ ಸಾಗಿಸಬೇಕೆಂದರೆ ಪ್ರಕೃತಿಯ ಆಶೀರ್ವಾದ ಬೇಕು. ಪರಿಸರ ಸಂರಕ್ಷಣೆ ಕೂಡ ದೇಶಾಭಿಮಾನ, ರಾಷ್ಟ್ರೀಯತೆ ಎಂಬ ಅಭಿಯಾನ ನಡೆಯಬೇಕು ಎಂದು ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ.