ಮಡಿಕೇರಿ: ನಿರ್ವಹಣೆ ಉದ್ದೇಶದಿಂದ ಆದಾಯ ಕ್ರೋಡೀಕರಣಕ್ಕೆ ಮುಂದಾಗಿರುವ ಕೊಡಗು ವೃತ್ತದ ಅರಣ್ಯ ಇಲಾಖೆ ಕುಶಾಲನಗರ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ನಿಸರ್ಗಧಾಮ, ದುಬಾರೆ ಹಾಗೂ ಹಾರಂಗಿ ಸಾಕಾನೆ ಶಿಬಿರಗಳ ಎಂಟ್ರೀ ಫೀಸ್ ನಲ್ಲಿ ಏರಿಕೆ ಮಾಡಿದೆ.
ಕಾವೇರಿ ನಿಸರ್ಗಧಾಮ ಪ್ರವೇಶ ಶುಲ್ಕ ಪ್ರಸ್ತುತ ಇದ್ದ 30 ರೂ 60 ರೂಗಳಿಗೆ ಏರಿಕೆ ಮಾಡಲಾಗಿದೆ. ದುಬಾರೆಗೆ ಪ್ರವೇಶ ಶುಲ್ಕ 50 ರಿಂದ 100 ಹಾಗೂ ಹಾರಂಗಿ ಸಾಕಾನೆ ಶಿಬಿರಕ್ಕೆ 30 ರಿಂದ 50 ರೂಗಳಿಗೆ ಏರಿಕೆ ಮಾಡಲಾಗಿದೆ. 2023 ಜನವರಿ 1 ಸೋಮವಾರದಿಂದ ಈ ಶುಲ್ಕಗಳು ಅನ್ವಯವಾಗಲಿದೆ.
ನಿರ್ವಹಣೆ ಉದ್ದೇಶ: ಈಗಾಗಲೆ ಕಾವೇರಿ ನಿಸರ್ಗಧಾಮದಲ್ಲಿರುವ ಹಳೆಯ ತೂಗು ಸೇತುವೆ ಶಿಥಿಲಾವಸ್ಥೆಯಲ್ಲಿರುವ ಕಾರಣ ಈ ಸೇತುವೆ ಮೇಲಿನ ಓಡಾಟವನ್ನು ಬಂದ್ ಮಾಡಲಾಗಿದೆ. ಸೇತುವೆ ದುರಸ್ಥಿಗೆ ಅಂದಾಜು 45 ಲಕ್ಷ ಅಗತ್ಯವಿದೆ. ಸೇತುವೆ ದುರಸ್ಥಿ ಸೇರಿದಂತೆ ಮಾನವ ಪ್ರಾಣಿ ಸಂಘರ್ಷದ ಪರಿಹಾರ ಮೊತ್ತ ಕೂಡ ಏರಿಕೆಯಾಗಿರುವ ಕಾರಣ ಇದರ ನಿರ್ವಹಣೆ ಉದ್ದೇಶದಿಂದ ಪ್ರವೇಶ ದರ ಏರಿಕೆ ಮಾಡಿ ಹಣ ಕ್ರೋಡೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಕೊಂಚ ಕಡಿಮೆಯಿದೆ. ಹೀಗಾಗಿ ಶುಲ್ಕ ಏರಿಕೆ ಮಾಡಲಾಗಿದೆ. ಇದರಿಂದ ಬರುವ ಆದಾಯವನ್ನು ಕೊಡಗು ಮಾನವ ಪ್ರಾಣಿ ಸಂಘರ್ಷ ಉಪಶಮನ ನಿಧಿಗಳಿಗೆ ಬಳಕೆ ಮಾಡಲಾಗುತ್ತದೆ.
ಹೆಚ್ಚಿದ ಪ್ರವಾಸಿಗರು: ಡಿಸೆಂಬರ್ನಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ. ಡಿ.24 ರಿಂದ 30 ರವರೆಗೆ ಪ್ರತಿದಿನ ಅಂದಾಜು 3000 ಪ್ರವಾಸಿಗರು ಆಗಮಿಸಿದ್ದು ಕ್ರಿಸ್ಮಸ್ ದಿನ 4300 ಮಂದಿ ಭೇಟಿ ನೀಡಿದ್ದಾರೆ.
ಹಳೆಯ ತೂಗು ಸೇತುವೆ ಬಂದ್ ಮಾಡಿರುವ ಕಾರಣ ಪಕ್ಕದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾತ್ಕಾಲಿಕ ತೂಗುಸೇತುವೆ ಮೂಲಕ ನಿಸರ್ಗಧಾಮ ಪ್ರವೇಶಕ್ಕೆ ಅವಕಾಶ ಕಲ್ಲಿಸಲಾಗಿದೆ. ಏಕಕಾಲದಲ್ಲಿ ಹೆಚ್ಚಿನ ಪ್ರವಾಸಿಗರ ಈ ತಾತ್ಕಾಲಿಕ ಸೇತುವೆ ಮೂಲಕ ಹಾದು ಹೋಗುವುದು ಅಸಾಧ್ಯ ಹಾಗೂ ಅಪಾಯಕಾರಿ ಆದ ಕಾರಣ ಏಕಕಾಲಕ್ಕೆ ಕೇವಲ 30 ಮಂದಿಯನ್ನು ಮಾತ್ರ ಒಳ ಬಿಡಲಾಗುತ್ತಿದೆ.
ಫೆ . 15 ರೊಳಗೆ ತೂಗುಸೇತುವೆ ಮುಕ್ತ: ಈಗಾಗಲೆ ತೂಗು ಸೇತುವೆ ದುರಸ್ಥಿ ಕಾರ್ಯ ಹಿನ್ನಲೆಯಲ್ಲಿ ಸೇತುವೆ ಬಂದ್ ಮಾಡಲಾಗಿದೆ. ಕೊರಿಯಾದಿಂದ ರೋಪ್ ಬರಬೇಕಿರುವ ಕಾರಣ ದುರಸ್ಥಿ ಕಾರ್ಯ ವಿಳಂಭವಾಗಿದೆ.
ಮುಂದಿನ ಫೆ. 15 ರೊಳಗೆ ಸೇತುವೆ ದುರಸ್ಥಿ ಮಾಡಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.