ಮಡಿಕೇರಿ: ಕೆರೆಗಳ ದಡದ ಬಳಿ, ಕೆರೆಗಳ ಏರಿ ಮೇಲೆ ಹಾದು ಹೋಗಿರುವ ರಸ್ತೆಗಳ ಬದಿಯಲ್ಲಿ ಯಾವುದೇ ರೀತಿಯ ತಡೆಗೋಡೆಗಳನ್ನು ನಿರ್ಮಿಸದ ಕಾರಣ ಹಲವು ಅವಘಡಗಳು ಸಂಭವಿಸಿ ಪ್ರಾಣಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದೆ ಬಹಳಷ್ಟು ಇವೆ. ಆದರೂ ಇವತ್ತಿಗೂ ಅಪಾಯ ಸಂಭವಿಸುವ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡುವಲ್ಲಿ ಸಂಬಂಧಿಸಿದ, ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣಮೌನ ವಹಿಸಿರುವುದು ಅಲ್ಲಲ್ಲಿ ನೋಡಲು ಸಿಗುತ್ತದೆ.
ಇದಕ್ಕೊಂದು ನಿದರ್ಶನ ಕೊಡಗು ಜಿಲ್ಲೆಯ ಕುಶಾಲನಗರ ಬಳಿಯ ಕೂಡುಮಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಆನೆಕೆರೆಯಾಗಿದೆ. ವಿಶಾಲವಾದ ಕೆರೆಯ ಬದಿಯಲ್ಲಿಯೇ ರಸ್ತೆ ಹಾದು ಹೋಗಿದ್ದು, ಈ ರಸ್ತೆಯಿಂದ ಸ್ವಲ್ಪ ನಿಯಂತ್ರಣ ತಪ್ಪಿದರೂ ಕೆರೆಗೆ ಬೀಳುವ ಪರಿಸ್ಥಿತಿಯಿದೆ. ಈ ಕೆರೆಯ ಬದಿಯಲ್ಲಿ ಹಾದು ಹೋಗಿರುವ ರಸ್ತೆ ಗ್ರಾಮಸ್ಥರಿಗೆ ಸಂಪರ್ಕ ಸೇತುವಾಗಿದೆ.
ಸುತ್ತಮುತ್ತಲ ಗ್ರಾಮಸ್ಥರು ಈ ರಸ್ತೆಯ ಮೂಲಕವೇ ಹಾದು ಹೋಗುತ್ತಾರೆ. ಕಿರಿದಾದ ರಸ್ತೆಯಲ್ಲಿ ವಾಹನಗಳು ಓಡಾಡುತ್ತವೆ. ಈ ರಸ್ತೆಗೆ ಹೊಂದಿಕೊಂಡಂತೆ ಆನೆಕೆರೆಯಿದೆ. ಈ ಕೆರೆಯಲ್ಲಿ ಸದಾ ನೀರು ತುಂಬಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರೆ, ಅತ್ತ ಮಳೆಯಿಂದಾಗಿ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸವಾಗುತ್ತದೆ. ಇಂತಹ ಸಂದರ್ಭ ಈ ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವವರು ಪ್ರಾಣ ಕೈನಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ. ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ಕೆರೆ ಪಾಲಾಗಬೇಕಾಗುತ್ತದೆ.
ಸಾಮಾನ್ಯವಾಗಿ ಈ ರಸ್ತೆ ಮತ್ತು ಕೆರೆಯ ಬಗ್ಗೆ ಸ್ಥಳೀಯರಿಗೆ ತಿಳಿದಿದೆ. ಆದರೆ ಹೊರಗಿನಿಂದ ಬರುವವರು ಈ ರಸ್ತೆಯಲ್ಲಿ ತೆರಳುವಾಗ ಎಚ್ಚರ ವಹಿಸದಿದ್ದರೆ ಅಪಾಯ ತಪ್ಪಿದಲ್ಲ. ಅದರಲ್ಲೂ ರಾತ್ರಿ ವೇಳೆ ಸಂಚರಿಸುವವರು ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಆದುದರಿಂದ ರಸ್ತೆ ಬದಿಯಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡಿ ಎಂದು ಸ್ಥಳೀಯರು ಬೇಡಿಕೆಯಿಡುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಕೆಲಸಗಳು ಆಗದಿರುವುದು ಬೇಸರ ತಂದಿದೆ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸುವ ಮೂಲಕ ಮುಂದೆ ನಡೆಯಬಹುದಾಗ ಅವಘಡಗಳನ್ನು ತಪ್ಪಿಸಬೇಕಾಗಿದೆ.