ಕೊಡಗು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಆಗಮಿಸುವ ಅಂತರರಾಜ್ಯ ಪ್ರವಾಸಿಗರಿಗೆ ಇದೀಗ ಅವರ ವಾಹನಕ್ಕೆ ಪ್ರವೇಶ ಶುಲ್ಕವನ್ನು ಅರಣ್ಯ ಇಲಾಖೆ ವಿಧಿಸುತ್ತಿದ್ದಾರೆ. ಲಘು ಮೋಟಾರ್ ವಾಹನಕ್ಕೆ ರೂ.20, ಬಾರಿ ವಾಹನಕ್ಕೆ ರೂ.50 ದರವನ್ನು ನಿಗದಿಪಡಿಸಲಾಗಿದೆ.
ಅರಣ್ಯ ಇಲಾಖೆಯ ಈ ಆದೇಶದಿಂದ ಇದೀಗ ಆನೆಚೋಕರು, ಮಾಲ್ದರೆ, ಕುಟ್ಟ, ನಾಗರಹೊಳೆ ಬೇಗೂರು, ಕರ್ಮಾಡು ಮುಂತಾದ ರಕ್ಷಿತ ಅರಣ್ಯದ ತಪಾಸಣಾ ಗೇಟ್ಗಳಲ್ಲಿ ಈ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಅರಣ್ಯದ ಅಂಚಿನ ರಸ್ತೆಯ ಅಭಿವೃದ್ಧಿ ಹಾಗೂ ಪ್ರವಾಸಿಗರಿಂದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಇದೀಗ ತಪಾಸಣಾ ಗೇಟ್ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶುಲ್ಕ ಸಂಗ್ರಹಿಸುವ ಸಂದರ್ಭ ಕೇರಳದ ಬಹುತೇಕರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ತಪಾಸಣೆ ಗೇಟಿನಲ್ಲಿ ತಮ್ಮ ವಾಹನವನ್ನು ಅಡ್ಡಗಟ್ಟಿ ಹಣವನ್ನು ಸಂಗ್ರಹಿಸುತ್ತಿರುವುದರಿಂದ ಸಮಯ ವ್ಯರ್ಥವಾಗುತ್ತಿದೆ ಎಂದು ಅವರುಗಳು ದೂರಿಕೊಂಡಿದ್ದಾರೆ. ತಪಾಸಣಾ ಗೇಟ್ಗಳಲ್ಲಿ ಇದೀಗ ಪ್ರತಿದಿನ ವಾದ ವಿವಾದಗಳನ್ನು ಅಲ್ಲಿನ ಸಿಬ್ಬಂದಿಗಳು ಅನುಭವಿಸುತ್ತಿದ್ದಾರೆ.