ಮಡಿಕೇರಿ, ಡಿ.24: ಕೊಡಗು ತುಳುವೆರ ಯುವ ಸಮಿತಿ ವತಿಯಿಂದ ಕೊಡಗಿನ ತುಳು ಭಾಷಿಕರನ್ನು ಒಗ್ಗೂಡಿಸಿ ರೂಪಿಸಲಾಗಿರುವ ಪ್ರಪ್ರಥಮ ಕೊಡಗು ತುಳುವೆರ ಪ್ರೀಮಿಯರ್ ಲೀಗ್ ಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.
ಸಾಹಿತಿ ಹಾಗೂ ವೈದ್ಯ ಮೇಜರ್ ಡಾ.ಕುಶ್ವಂತ್ ಕೋಳಿಬೈಲು ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿ, ಕೊಡಗಿನ ಅಭಿವೃದ್ಧಿಯಲ್ಲಿ ತುಳು ಭಾಷಿಕರ ಕೊಡುಗೆ ಗಣನೀಯವಾಗಿದೆ ಎಂದರು.
ಭಾಷೆಯು ಒಂದು ಪ್ರದೇಶ ಅಥವಾ ಜಾತಿಗೆ ಸೀಮಿತವಾದುದಲ್ಲ. ಅದು ಪ್ರಾದೇಶಿಕತೆ ಮತ್ತು ಸಂಸ್ಕೃತಿಯನ್ನೂ ಪ್ರತಿಬಿಂಬಿಸುತ್ತದೆ. ಕ್ರೀಡೆಯಿಂದ ಸಾಮರಸ್ಯ, ಪ್ರೀತಿ, ಸಂಬಂಧ, ವ್ಯವಹಾರ ಮತ್ತು ಭಾಷಾ ಸೌಹಾರ್ದತೆ ಬೆಳೆಯುತ್ತದೆ. ಇಂತಹ ದೂರದೃಷ್ಟಿಯ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ತುಳು ಭಾಷೆಯ ಉಳಿವಿಗಾಗಿ ಮತ್ತು ಒತ್ತಡದ ಬದುಕಿನಿಂದ ಹೊರಬರಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಉದ್ಯಮಿ ಅನಿಲ್ ಸೀನಪ್ಪ ಪೂಜಾರಿ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಪ್ರದರ್ಶಿಸುವಂತೆ ಕಿವಿಮಾತು ಹೇಳಿದರು.
ಸಭಾ ಕಾರ್ಯಕ್ರಮದ ಮೂಲಕ ಅತಿಥಿ ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು. ಮೊದಲ ಪಂದ್ಯದಲ್ಲಿ ಕೂರ್ಗ್ ವೈಲ್ಡ್ ಜವಾನ್ಸ್ ಹಾಗೂ ಹಿಂದೂ ಕ್ರಿಕೆಟ್ ಕ್ಲಬ್ ಮುಖಾಮುಖಿಯಾದವು.
ರಾಜ್ಯಮಟ್ಟದ ತೀರ್ಪುಗಾರರಾದ ಹರೀಶ್, ದಿನೇಶ್ ಆಚಾರ್ಯ ಮತ್ತು ಶ್ರೀನಿಕೇರ್ ರಾವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೀಕ್ಷಕ ವಿವರಣೆಗಾರರಾಗಿ ಮಂಗಳೂರಿನ ವಿಖ್ಯಾತ್ ಕಾರ್ಯ ನಿರ್ವಹಿಸಲಿದ್ದಾರೆ. ಪಂದ್ಯಾವಳಿಯನ್ನು ರಾಷ್ಟ್ರಮಟ್ಟದುದ್ದಕ್ಕೂ ವಿಸ್ತರಿಸುವ ಸಲುವಾಗಿ ಜೈ ಟಿ.ವಿ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.