ಮಡಿಕೇರಿ: ಬಿಜೆಪಿ 2019ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಆರುನೂರು ಭರವಸೆಗಳಲ್ಲಿ ಅರುವತ್ತನ್ನೂ ಈಡೇರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ ಸಂದರ್ಭ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಟೀಕಿಸಿದರಲ್ಲದೆ, ಬಿಜೆಪಿಯವರು ಯಾವ ಭರವಸೆಯನ್ನೂ ಈ ಹಿಂದೆಯೂ ಈಡೇರಿಸಿಲ್ಲ – ಮುಂದೆಯೂ ಈಡೇರಿಸುವುದಿಲ್ಲ. ಹತ್ತು ವರ್ಷಗಳಿಂದ ಮೋದಿ ಪ್ರಧಾನಿಯಾಗಿ ಭಾರತಕ್ಕೆ ಏನು ಮಾಡಿದ್ದಾರೆ ಎಂಬ ಅವಲೋಕನ ಆಗಲಿ – ಮತ್ತೆ ಮುಂದೇನು ಎಂಬ ಯೋಚನೆ ಮಾಡೋಣ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಧಿಕವಾಗಿದ್ದು, ಎಲ್ಲರಿಗೂ ಉದ್ಯೋಗ ನೀಡುತ್ತೇವೆ ಎಂದಿದ್ದ ಮೋದಿ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಶ್ರೀನಿವಾಸ್ ಪ್ರಸಾದ್ ಭೇಟಿ ಕುರಿತಂತೆ ಮಾತನಾಡಿದ ಅವರು ನಾನು ಅವರು ಸಮಕಾಲೀನರು, ನಾವಿಬ್ಬರೂ ಒಟ್ಟಿಗೆ ರಾಜಕೀಯ ಮಾಡಿದವರು ಅವರ ಆರೋಗ್ಯ ವಿಚಾರಿಸಲು ಮನೆಗೆ ತೆರಳಿದ್ದೆ ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದರಲ್ಲದೆ, ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದು ಹೆಣ್ಣು ಮಕ್ಕಳ ಬಗ್ಗೆ ಕಳಕಳಿಯಿಲ್ಲ. ಹೀಗಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದರಲ್ಲದೆ, ಎಚ್.ಡಿ. ದೇವೇಗೌಡರ ಟೀಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ.ಮಂಥರ್ ಗೌಡ, ಕೆ ವೆಂಕಟೇಶ್, ಲೋಕಸಭಾ ಅಭ್ಯರ್ಥಿ ಎಂ. ಲಕ್ಷ್ಮಣ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧಮ೯ಜ ಉತ್ತಪ್ಪ, ಅರುಣ್ ಮಾಚಯ್ಯ ಸೇರಿದಂತೆ ಪ್ರಮುಖ ನಾಯಕರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತ ನೀಡಿದರು.