ಭಾಗಮಂಡಲ: ಭಗಂಡೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವ ವಿಶೇಷ ಪೂಜಾ ಕೈಂಕರ್ಯದೊಂದಿಗೆ ನೆರವೇರಿತು.
ದೇವಾಲಯದಲ್ಲಿ ಬಾಳೆ ದಿಂಡಿನಿಂದ ಮಾಡಲಾದ ಉತ್ಸವದ ಮಂಟಪಕ್ಕೆ ದೀಪ ಬೆಳಗಿಸಿ, ಕರಿಮಣಿ ಬಿಚ್ಚೋಲೆ, ಕಾವೇರಿ ಮಾತೆಗೆ ವಸ್ತ್ರಾಭರಣ, ಬೆಳ್ಳಿತಟ್ಟೆ, ಬೆಳ್ಳಿಯ ತೊಟ್ಟಿಲು, ಚಿನ್ನದ ಮಾಂಗಲ್ಯ ಸರವನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯಕ್ಕೆ ಪ್ರದಕ್ಷಿಣೆಹಾಕಿ ತ್ರಿವೇಣಿ ಸಂಗಮಕ್ಕೆ ಕೊಂಡೊಯ್ದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಕಾವೇರಿ ನದಿ ನೀರಿನಲ್ಲಿ ಬಾಳೆದಿಂಡಿನ ಮಂಟಪವನ್ನು ತೇಬಿಡಲಾಯಿತು.
ದೇವಾಲಯದ ಅರ್ಚಕರಾದ ರವಿ ಭಟ್ ಹಾಗೂ ಹರೀಶ್ ಭಟ್ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಗಳು ಜರುಗಿದ್ದು, ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ಪಾರುಪತ್ತೆಗಾರ ಪೊನ್ನಣ್ಣ, ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯರಾದ ಶಿರಕಜ್ಜೆ ನಾಗೇಶ್, ದಂಡಿನ ಜಯಂತ್, ಸ್ಥಳೀಯ ದೇವಾಲಯದ ತಕ್ಕರಾದ ಹೊಸಗದ್ದೆ ಭಾಸ್ಕರ, ಕುದುಪಜೆ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಹಿಂದೆ ಕಕ್ಕಡ ಆರಂಭದಲ್ಲಿಯೇ ವ್ಯಾಪಕ ಮಳೆಯಾಗುತ್ತಿತ್ತು. ಇದರಿಂದಾಗಿ ಯಾವುದೇ ಜೀವಕ್ಕೆ ಹಾನಿಯಾಗದಂತೆ ಕಾವೇರಿ ಮಾತೆಗೆ ಪ್ರಾರ್ಥಿಸಲು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇದೊಂದು ರೀತಿಯಲ್ಲಿ ಜೀವನದಿ ಕಾವೇರಿಯ ತ್ರಿವೇಣಿ ಸಂಗಮಕ್ಕೆ ಅರ್ಪಿಸುವ ಬಾಗಿನ ಎಂದರೂ ತಪ್ಪಾಗಲಾರದು.