ಮಡಿಕೇರಿ : ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮಗಳ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರಕಾರದಿಂದ 1.30 ಕೋಟಿ ಹಣ ಬಿಡುಗಡೆಯಾಗಿದ್ದು, 2024 ರ ಹೊತ್ತಿಗೆ ಗ್ರಾಮದ ಎಲ್ಲಾ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೋಗಲು ರಸ್ತೆ , ತಡೆಗೋಡೆ ನಿರ್ಮಿಸಲು ಮತ್ತು ಇಂಟರ್ ಲಾಕ್ ಅಳವಡಿಸುವ ಸುಮಾರು 17 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಕಾಮಗಾರಿಗೆ ಸಂಸದರ ನಿಧಿಯಿಂದ 3 ಲಕ್ಷ, ವಿಧಾನ ಪರಿಷತ್ ಸದಸ್ಯರ ಅನುದಾನದಿಂದ 5 ಲಕ್ಷ, ವಿಧಾನ ಸಭಾ ಸದಸ್ಯರ ಅನುದಾನದಿಂದ 5 ಲಕ್ಷ ಮತ್ತು ರಸ್ತೆಗೆ 4 ಲಕ್ಷ ರೂ.ಗಳ ಅನುದಾನವಿದೆ ಎಂದರು.
ಪ್ರಧಾನ ಮಂತ್ರಿಗಳ ಜಲಜೀವನ್ ಮಿಷನ್ ಯೋಜನೆಯನ್ವಯ ಕೇಂದ್ರ ಸರಕಾರ ಶೇಕಡ 60 ಮತ್ತು ರಾಜ್ಯ ಸರಕಾರ ಶೇಕಡಾ 40 ಮತ್ತು ಗ್ರಾಮ ಪಂಚಾಯಿತಿ ಶೇಕಡಾ 15 ರಷ್ಟು ಹಣವನ್ನು ವ್ಯಯಿಸಸಬೇಕಿದೆ. ಈ ಯೋಜನೆಯ ಫಲಾನುಭಾವಿಗಳು ಉಪಯೋಗಿಸುವ ನೀರಿಗೆ ವಾರ್ಷಿಕವಾಗಿ ಸ್ವಲ್ಪ ರೀತಿಯ ಹಣವನ್ನು ಪಾವತಿ ಮಾಡಬೇಕಿದೆ ಎಂದರು.
ಈಗಾಗಲೇ ರಾಜ್ಯ ಸರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯ ದುರಸ್ತಿಗೆ ಹಣವನ್ನು ಬಿಡುಗಡೆ ಮಾಡಿದೆ ಎಂದ ಅವರು, ನಿರಂತರ ಮಳೆಯಿಂದ ಕಾಮಗಾರಿಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ರಸ್ತೆಗಳು ತೀರಾ ಹದಗೆಟ್ಟಿದ್ದು ನಡೆಯಲಾರದ ಸ್ಥಿತಿಗೆ ತಲುಪಿದ್ದು, ಮಳೆ ನಿಂತ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಇದಕ್ಕೆ ಜನರ ಸಹಕಾರ ಮುಖ್ಯ ಎಂದು ಹೇಳಿದರು.
ಗ್ರಾಮೀಣ ರಸ್ತೆಗಳು ಸತತ ಮಳೆಯಿಂದಾಗಿ ಹದಗೆಡುತ್ತಿವೆ. ಮಳೆ ನಿಂತ ಕೂಡಲೇ ರಸ್ತೆಗಳನ್ನು ದುರಸ್ತಿಪಡಿಸಲು ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪಾಡಿ ಇಗ್ಗುತ್ತಪ್ಪ ದೇವಾಲಯದ ಅರ್ಚಕರಾದ ಶ್ರೀನಿವಾಸ್ ಮತ್ತು ಶ್ರೀಕಾಂತ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.