ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಮಡಿಕೇರಿ- ಕುಶಾಲನಗರ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಮಿತಿ ಮೀರುತ್ತಿದ್ದು, ಪ್ರತಿದಿನ ಸಾವುನೋವುಗಳು ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವೃತ್ತದ ಕೊಡಗು ಜಿಲ್ಲಾ ಉಸ್ತುವಾರಿ ಸಹಾಯಕ ಮುಖ್ಯ ಅಭಿಯಂತರ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ
ನಗರದಲ್ಲಿ ಅಭಿಯಂತರರನ್ನು ಭೇಟಿಯಾದ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ನಿರ್ದೇಶಕ ಸುಲೇಮಾನ್ ಹೆದ್ದಾರಿ ಹೆಚ್ಚು ಅಪಾಯಕಾರಿಯಾಗಿದೆ ಎಂದು ವಿವರಿಸಿದರು.
ಮಡಿಕೇರಿ- ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ರ 32 ಕಿ.ಮೀ ವ್ಯಾಪ್ತಿಯಲ್ಲಿ ನಿತ್ಯ ಅಪಘಾತಗಳು ಸಂಭವಿಸಿ ಸಾವು, ನೋವುಗಳಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆಸ್ತಿಗೂ ಹಾನಿಯಾಗುತ್ತಿದೆ. ಆದ್ದರಿಂದ ಅಪಘಾತ ವಲಯವನ್ನು ಗುರುತಿಸಿ ಬ್ಯಾರಿಕೇಡ್, ಸಣ್ಣ ಪ್ರಮಾಣದ ವೇಗ ನಿಯಂತ್ರಕ, ರಸ್ತೆಯ ಬದಿಗಳಲ್ಲಿ ಎಚ್ಚರಿಕೆಯ ಸೈನ್ ಬೋರ್ಡ್ ಗಳನ್ನು ಅಳವಡಿಸಬೇಕು ಮತ್ತು ಕಾಡು ಕಡಿಯಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಅಭಿಯಂತರ ನಾಗರಾಜ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು.