ಮಡಿಕೇರಿ: ವೃದ್ಧೆಯೊಬ್ಬರನ್ನು ಪುಸಲಾಯಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಡಿ ಆಕೆಯ ಕಿವಿಯಲ್ಲಿದ್ದ ಓಲೆಯನ್ನು ಕದ್ದೊಯ್ದ ಇಬ್ಬರು ಆರೋಪಿಗಳನ್ನು ವೀರಾಜಪೇಟೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಪಾರಾಣೆ ಪಂಚಾಯತ್ ವ್ಯಾಪ್ತಿಯ ಬಾವಲಿ, ಕಿರುಂದಾಡು ನಿವಾಸಿ ಮಣಿ ಅಲಿಯಾಸ್ ಕುಟ್ಟಪ್ಪ (50) ಹಾಗೂ ನಾಲ್ಕೇರಿ ಗ್ರಾಮದ ಲಕ್ಕುಂದ ಪೈಸಾರಿ ನಿವಾಸಿ ಗಾಯತ್ರಿ (45) ಬಂಧಿತ ಆರೋಪಿಗಳು.
ಬೋಯಿಕೇರಿ ಗ್ರಾಮದ ವೃದ್ಧೆ ರಾಜಮ್ಮ (65) ವೀರಾಜಪೇಟೆಯ ಕ್ಯಾಂಟಿನ್ವೊಂದರಲ್ಲಿ ಕೆಲಸ ಮಾಡುತಿದ್ದಾರೆ. ಕ್ಯಾಂಟೀನ್ಗೆ ಸದಾ ಬರುತ್ತಿದ್ದ ಕುಟ್ಟಪ್ಪನಿಗೆ ಯಾವುದಾದರೂ ಮನೆಯಲ್ಲಿ ಕೆಲಸ ಕೊಡಿಸುವಂತೆ ಕೇಳಿದ್ದರು. ಇದನ್ನೇ ನೆಪಮಾಡಿಕೊಂಡ ಕುಟ್ಟಪ್ಪ ಬೇಟೋಳಿ ಚಿಟ್ಟಡೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆಕೆಯ ಕಿವಿಯಲ್ಲಿದ್ದ ಓಲೆಯನ್ನು ಅಪಹರಿಸಿ ಪರಾರಿಯಾಗಿದ್ದರು.
ಅಸ್ವಸ್ಥರಾಗಿದ್ದ ರಾಜಮ್ಮ ಮನೆಗೆ ಹಿಂದಿರುಗಿ ನಡೆದ ಘಟನೆಯನ್ನು ಪತಿಗೆ ತಿಳಿಸಿದ್ದಾರೆ. ಈ ಬಗ್ಗೆ ವೀರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.