ಮಡಿಕೇರಿ : ರೈತರ ಹೋರಾಟಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಪರ ಸಂಘಟನೆಗಳ ಒಕ್ಕೂಟ ಮಡಿಕೇರಿಯಲ್ಲಿ ಜಾಥಾ ನಡೆಸಿತು.
ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಾಥಾ ನಡೆಸಿದ ಪ್ರಮುಖರು, ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಕೃಷಿ ವಿರೋಧಿ ನೀತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಒಂದು ವರ್ಷದಿಂದ ದೇಶವ್ಯಾಪಿ ರೈತರು ಹೋರಾಟ ನಡೆಸುತ್ತಾ ಬಂದಿದ್ದು, 750 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ 3 ಕೃಷಿ ಕಾಯಿದೆಗಳನ್ನು ಹಿಂಪಡೆಯುವುದಾಗಿ ಹೇಳಿದೆ. ಆದರೆ ರೈತರಿಗೆ ಬೇಡವಾದ ಇನ್ನೂ ಕೆಲವು ಕಾಯ್ದೆಗಳಿದ್ದು, ಇವುಗಳನ್ನು ಕೂಡಾ ತಕ್ಷಣ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಲ್ಲಾ ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ನಿರಂತರಗೊಳಿಸಲು ರೈತ ಪರ ಸಂಘಟನೆಗಳು ನಿರ್ಧರಿಸಿದ್ದು, ಕೊಡಗಿನಲ್ಲೂ ಸಂಪೂರ್ಣ ಬೆಂಬಲ ನೀಡಲಾಗುವುದೆಂದು ಪ್ರಮುಖರು ತಿಳಿಸಿದರು.
ಬೇಡಿಕೆಗಳು: ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕಾಯಿದೆ ಜಾರಿಯಾಗಬೇಕು, ವಿದ್ಯುತ್ ಖಾಸಗೀಕರಣ ರದ್ದುಗೊಳಿಸಿ, ಕೃಷಿ ಮತ್ತು ಬಡವರಿಗೆ ಉಚಿತ ವಿದ್ಯುತ್ ನೀಡಬೇಕು, ಕಳೆದ ಒಂದು ವರ್ಷದಿಂದ ದೆಹಲಿಯ ಗಡಿಗಳಲ್ಲಿ ರೈತ ಹೋರಾಟದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡಬೇಕು, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜಾನುವಾರು ಮಾಂಸ ಮಾರಾಟ ನಿಷೇಧ ಕಾಯಿದೆ ಹಿಂಪಡೆಯಬೇಕು, ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಬೇಕು, ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಕೊಡಗು ಜಿಲ್ಲೆಗೆ ಅಸ್ಸಾಂ ಮತ್ತು ಇತರ ರಾಜ್ಯಗಳಿಂದ ಹರಿದು ಬರುತ್ತಿರುವ ಕಾರ್ಮಿಕರನ್ನು ತಡೆಗಟ್ಟಬೇಕು, ಕೊಡಗಿನಲ್ಲಿ ಕೋಮು ದ್ವೇಷ ಹುಟ್ಟುಹಾಕಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕಿ ಡಾ.ಹೆಚ್.ಎಂ.ಕಾವೇರಿ, ಪ್ರಮುಖರಾದ ಡಿ.ಎಸ್.ನಿರ್ವಾಣಪ್ಪ, ಅಮೀನ್ ಮೊಹಿಸಿನ್, ಕೆ.ಮೊಣ್ಣಪ್ಪ, ಮನ್ಸೂರ್, ರಾಜು, ರವಿಗೌಡ, ಹಮೀದ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ಕ್ರಮವನ್ನು ಖಂಡಿಸಿದರು.