ಕೊಡಗು: ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಬ್ಯಾಲ ಗ್ರಾಮದ ಕೃತಿಗುರು(29),ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಶಶಿಕುಮಾರ್ (28) ಹಾಗೂ ಸೋಮವಾರಪೇಟೆ ತಾಲೂಕಿನ ಕಣಿವೆಬಸವನಹಳ್ಳಿ ಗ್ರಾಮದ ಸಂಜು(35) ಬಂಧಿತ ಆರೋಪಿಗಳು.
ಆರೋಪಿಗಳು ಶನಿವಾರಸಂತೆ ವಲಯದ ಮಾಲಂಬಿ ಶಾಖೆಯ ಕಣಿವೆಬಸವನಹಳ್ಳಿ ಗ್ರಾಮದ ಸಂಜೀವ ಎಂಬವರಿಗೆ ಸೇರಿದ್ದೆನ್ನಲಾದ ಕಾಫಿ ತೋಟದಲ್ಲಿ ಬೆಳೆದು ನಿಂತಿದ್ದ ಎರಡು ಶ್ರೀಗಂಧದ ಮರಗಳನ್ನು ಕಡಿದು 7 ತುಂಡುಗಳನ್ನಾಗಿ ಪರಿವರ್ತಿಸಿದ್ದಲ್ಲದೆ, ಕೆಎ-19 ಎನ್ 4911ರ ಮಾರುತಿ ಕಾರಿನಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದರೆನ್ನಲಾಗಿದೆ.
ವಿಷಯವರಿತ ಉಪ ವಲಯ ಅರಣ್ಯಾಧಿಕಾರಿ ಸೂರ್ಯ ಎಂ.ಜೆ. ಹಾಗೂ ಅರಣ್ಯ ರಕ್ಷಕರಾದ ವೆಂಕಟೇಶ್ ,ಶಂಕರಗೌಡ ಕುಲಕರ್ಣಿ ಮತ್ತು ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮಾಲು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ.