ಕೊಡಗು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿವಿಧ ಇಲಾಖೆ ಸಚಿವರುಗಳನ್ನು ಭೇಟಿ ಮಾಡಿದ ಕೊಡಗು ಕಾಫಿ ಬೆಳೆಗಾರರ ನಿಯೋಗ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿತು. ಕಾಫಿ ಕೃಷಿಗೆ ಉಪಯೋಗಿಸುತ್ತಿರುವ 10 ಹೆಚ್.ಪಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು ಮತ್ತು ಹಳೆಯ ಬಾಕಿ ಇರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಪ್ರಮುಖರು ಕೋರಿದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಯಿತು. ಇದೇ ಸಂದರ್ಭ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇಂಧನ ಖಾತೆ ಸಚಿವ ಸುನಿಲ್ ಕುಮಾರ್, ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರುಗಳಿಗೂ ನಿಯೋಗ ಮನವಿ ಸಲ್ಲಿಸಿತು.
ಕುಶಾಲನಗರ ತಾಲೂಕು ಅಭಿವೃದ್ಧಿ ಕುರಿತು ಸಚಿವರುಗಳ ಗಮನ ಸೆಳೆದಾಗ ಸೂಕ್ತ ಕ್ರಮದ ಭರವಸೆ ದೊರಕಿತು. ಬೆಳಗಾರರಾದ ಎಂ.ಎನ್.ಕೊಮಾರಪ್ಪ, ದಾಸಂಡ ರಮೇಶ್, ಡಾ.ಶಶಿಕಾಂತ್ ರೈ, ಎಂ.ಎಲ್.ಗೌತಮ್, ಚಂದ್ರಶೇಖರ್ ಹೇರೂರು, ದಾಸಂಡ ಜಗದೀಶ್, ಕಿರಣ್, ಮೊಳ್ಳೆರ ಜಗನ್, ಮುಂಂಡ ಪ್ರದೀಪ್, ಸುರೇಶ್, ಕೋಟೆರ ಶಾಶ್ವತ್ ಬೋಪಣ್ಣ, ಕೊರವಂಡ ಸಂತೋಷ್ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.